ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಖಾಸಗಿ ಬಾವಿಯೊಂದರಲ್ಲಿ ಮಂಗಳವಾರ ಬೃಹತ್ ಮೊಸಳೆ ಕಾಣಿಸಿಕೊಂಡಿದ್ದು, ಸುತ್ತಲಿನ ನಾಗರಿಕರು ಆತಂಕಕ್ಕೀಡಾದ ಘಟನೆ ನಡೆದಿದೆ. ನಾಗೂರು ಒಡೆಯರ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದಿದೆ.
ಬೈಂದೂರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೊಸಳೆಯನ್ನು ಹಿಡಿಯಲು ಕೇಜ್ ಇರಿಸಿದ್ದು ಒಳಗಡೆ ಕೋಳಿ ಮಾಂಸ ಇರಿಸಲಾಗಿದೆ. ಅದರ ಚಲನವಲನಗಳ ಮೇಲೆ ಕಣ್ಗಾವಲಿರಿಸಲು ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಮೊಸಳೆ ಬೇರೆ ಭಾಗಗಳಿಂದ ಮೇಲಕ್ಕೆ ಭಾರದಂತೆ ಸುತ್ತಲು ಬಲೆ ಅಳವಡಿಸಲಾಗಿದೆ. ಡಿಢೀರ್ ಪ್ರತ್ಯಕ್ಷವಾದ ಮೊಸಳೆಯನ್ನು ನೋಡಲು ನೂರಾರು ಜನರು ತೆರಳುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನೆರೆಯ ಸಂದರ್ಭದಲ್ಲಿ ಮೊಸಳೆ ಬೇರೆಡೆಯಿಂದ ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಬೈಂದೂರು ತಹಶಿಲ್ದಾರ್ ಪ್ರದೀಪ್ ಆರ್., ವಲಯ ಅರಣ್ಯಾಧಿಕಾರಿ ಸಂದೇಶ್, ಪಿಎಸೈ ತಿಮ್ಮೇಶ್ ಮೊದಲಾದವರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.