ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದೇವರಿಗೆ ಕುಂಭಾಬಿಷೇಕ ಮಾಡುವುದರಿಂದ ಆಯುಷ್ಯ, ಶ್ರಿಯ ಪ್ರಾಪ್ತಿಯಾಗುತ್ತದೆ. ಮಾಡಿದ ಕೆಲಸ ಅಕ್ಷಯವಾಗುತ್ತದೆ. ಜೀವನದಲ್ಲಿ ಕೀರ್ತಿ ಪ್ರಾಪ್ತಿಯಾಗುತ್ತದೆ. ಯೋಗ್ಯತೆಗೆ ತಕ್ಕಂತೆ ಫಲ, ಪುಣ್ಯ ಸಿಗುತ್ತದೆ. ಸಹಸ್ರ ಕನಕಾಭಿಷೇಕ ಮಾಡುವುದರಿಂದ ದೇಶಕ್ಕೆ, ಸಮಾಜಬಾಂಧವರಿಗೆ ಒಳಿತಾಗುತ್ತದೆ. ಸುಮಾರು 475 ವರ್ಷ ಇತಿಹಾಸವುಳ್ಳ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನವು ಜೀರ್ಣೋದ್ಧಾರಗೊಂಡು, ಬಳಿಕ ಬ್ರಹ್ಮ ರಥೋತ್ಸವ, ಸಹಸ್ರ ಕುಂಭಾಬಿಷೇಕ ನಡೆದು ಸಮಾಜದಲ್ಲಿ ಅಭಿವೃದ್ಧಿ ಕಾಣುವಂತಾಗಿದೆ. ಇಂದು ಶ್ರೀದೇವಿಗೆ ಸಹಸ್ರಾಧಿಕ ಅಷ್ಟತ್ತರ ಶತ (1108) ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕ ನಡೆದಿದ್ದು, ಇದರ ಪುಣ್ಯದ ಫಲ ಸಮಸ್ತ ಸಮಾಜಬಾಂಧವರಿಗೆ ಪ್ರಾಪ್ತಿಯಾಗಿ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು.
ಅವರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜೀರ್ಣೋದ್ಧಾರ ಪುನಃ ಪ್ರತಿಷ್ಠಾ ರಜತ ಮಹೋತ್ಸವ ಪ್ರಯುಕ್ತ ಶ್ರೀದೇವಿಗೆ ಸಹಸ್ರಾಧಿಕ ಅಷ್ಟತ್ತರ ಶತ ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕವು ನೆರವೇರಿಸಿ ಆಶೀರ್ವಚನ ನೀಡಿದರು.
ಶ್ರೀದೇವಿಗೆ ಸಹಸ್ರಾಧಿಕ ಅಷ್ಟತ್ತರ ಶತ ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕವು ನೆರವೇರಿಸಿದ ಶ್ರೀಗಳು ಉಭಯ ದೇವರಿಗೆ ಸುವರ್ಣ ಹಾರ ಸಮರ್ಪಣೆ ಮಾಡಿದರು. ಬಳಿಕ ಶ್ರೀ ಮಹಾಲಸಾ ಸಭಾ ಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ವಿಶೇಷ ಸೇವಾದಾರರಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಇದೇ ಸಂದರ್ಭ ದೇವಸ್ಥಾನದ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಾಂತೇರಿ ಸಭಾ ಮಂಟಪವನ್ನು ಶ್ರೀಗಳು ಉದ್ಘಾಟಿಸಿದರು.
ಮಧ್ಯಾಹ್ನ ಯಜ್ಞದ ಮಹಾ ಪೂರ್ಣಾಹುತಿ ಧ್ವಜಾವರೋಹಣ, ದೇವರಿಗೆ ಮಹಾ ನೈವೇದ್ಯ, ಮಹಾಮಂಗಳಾರತಿ, ಸೇವಾ ಪ್ರಸಾದ ವಿತರಣೆ, ಮಹಾ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ದೇವಸ್ಥಾನ ಆಡಳಿತ ಮಂಡಳಿಯ ಟಿ.ನಾರಾಯಣ ಪೈ, ದಿನಕರ ಶೆಣೈ, ಡಾ.ಕಾಶೀನಾಥ ಪೈ, ಬಿ. ನರಸಿಂಹ ಪೈ, ಡಾ. ವಿಶ್ವನಾಥ ಪೈ, ಪ್ರಭಾಕರ ಪೈ, ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಅರ್ಚಕರು, ಹತ್ತು ಸಮಸ್ತರು, ಸಮಾಜ ಬಾಂಧವರು, ಭಾಜಕರು ಉಪಸ್ಥಿತರಿದ್ದರು.