ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನ ಶಿಬಿರ 2025ರಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ (ಎನ್ಸಿಸಿ) ಕರ್ನಾಟಕ ಗೋವಾ ನಿರ್ದೇಶನಾಲಯವು ಪ್ರತಿಷ್ಠಿತ ಪ್ರಧಾನಮಂತ್ರಿಗಳ ಬ್ಯಾನರ್ನ್ನು ಗೆದ್ದುಕೊಂಡಿತು.
ಕರ್ನಾಟಕ ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಡಿಸೈನ್ ವಿಭಾಗದ ವಾಯುದಳದ ಎನ್ಸಿಸಿ ಕೆಡೆಟ್ ಹಾರ್ದಿಕ್ ಶೆಟ್ಟಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸ್ವೀಕಾರ ಮಾಡುವ ಅವಕಾಶ ಒದಗಿತು.
ಎನ್ಸಿಸಿ ಕರ್ನಾಟಕ ಗೋವಾ ನಿರ್ದೇಶನಾಲಯವು 124 ಕೆಡೆಟ್ಗಳನ್ನು ಈ ಭಾರಿ ಗಣರಾಜ್ಯೋತ್ಸವ ಪಥಸಂಚಲನ ಶಿಬಿರಕ್ಕೆ ಕಳುಹಿಸಿದ್ದು, ಅವರಲ್ಲಿ ಆಳ್ವಾಸ್ನ ಹಾರ್ದಿಕ್ ಶೆಟ್ಟಿ ಎಲ್ಲಾ ವಿಭಾಗದಲ್ಲೂ ಉತ್ತಮ ಕಾರ್ಯಕ್ಷಮತೆ ಮೆರೆದಿದ್ದು, ಡ್ರಿಲ್ ಚಟುವಟಿಕೆಯಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ತೋರಿದ್ದರಿಂದಾಗಿ ಈ ಅವಕಾಶ ಒದಗಿ ಬಂದಿದೆ.
ಪ್ರಧಾನಮಂತ್ರಿಗಳ ಬ್ಯಾನರ್ ಪ್ರಶಸ್ತಿಯನ್ನು ಪಡೆಯುವ ತಂಡವು ಹಲವು ಹಂತದ ಸ್ಪರ್ಧೆಗಳನ್ನು ಗೆದ್ದು, ಈ ಪ್ರಶಸ್ತಿಯನ್ನು ಸ್ವೀಕಾರ ಮಾಡುತ್ತದೆ. ಮುಖ್ಯವಾಗಿ ಅತ್ಯುತ್ತಮ ಗೌರವ ರಕ್ಷೆ, ಲೈನ್ ಏರಿಯದ ಸದ್ಬಳಕೆ, ಪ್ಲ್ಯಾಗ್ ಏರಿಯದ ಬಳಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಸ್ಟ್ ಕೆಡೆಟ್, ಡ್ರಿಲ್, ಶಿಸ್ತು, ವಿವಿಧ ಕ್ಯಾಂಪ್ಗಳಲ್ಲಿ ಕೆಡೆಟ್ಗಳ ಭಾಗವಹಿಸುವಿಕೆ, ಎನ್ಸಿಸಿ ಕರ್ನಾಟಕ ಗೋವಾ ನಿರ್ದೇಶನಾಲಯದ ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ಸ್ಪರ್ಧೆಯಲ್ಲಿ ಭಾರತದ ಒಟ್ಟು 17 ಎನ್ಸಿಸಿ ನಿರ್ದೇಶನಾಲಯಗಳು ಪಾಲ್ಗೊಂಡಿದ್ದು, ಎನ್ಸಿಸಿ ಕರ್ನಾಟಕ ಗೋವಾ ನಿರ್ದೇಶನಾಲಯವು ಮೊದಲ ಸ್ಥಾನವನ್ನು ಪಡೆದಿರುವುದು ಸಂತೋಷದ ವಿಷಯ. ಅದರಲ್ಲೂ 18 ಕರ್ನಾಟಕ ಬ್ಯಾಟಲಿಯನ್ನ ಹಾರ್ದಿಕ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿರುವುದು ಹೆಮ್ಮೆಯೆನಿಸುತ್ತದೆ ಎಂದು 18 ಕರ್ನಾಟಕ ಬ್ಯಾಟಲಿಯನ್ನ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ರೋಹಿತ್ ರೈ ತಿಳಿಸಿದರು.
ಗಣರಾಜ್ಯೋತ್ಸವ ಪಥಸಂಚಲನ ಶಿಬಿರ 2025 ರಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 5 ಕೆಡೆಟ್ಗಳು ಸೇರಿದಂತೆ ಒಟ್ಟು 49 ಕೆಡೆಟ್ಗಳು ಪಾಲ್ಗೊಂಡಿದ್ದು, ಇದೀಗ ನಮ್ಮ ಸಂಸ್ಥೆಯ ವಿದ್ಯಾರ್ಥಿಗೆ ಪ್ರಧಾನಮಂತ್ರಿಗಳಿಂದ ಪ್ರಶಸ್ತಿ ಸೀಕರಿಸುವ ಅವಕಾಶ ಬಂದೊದಗಿರುವುದು ಸಂಸ್ಥೆಯ ಎನ್ಸಿಸಿ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹಕ್ಕೆ ಇನ್ನಷ್ಟು ಇಂಬು ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಶುಂಪಾಲರು, ಅಧ್ಯಾಪಕರು ವಿದ್ಯಾರ್ಥಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.