ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲತೀತವಾದ ವಿಷಯಗಳು ಕಥೆಗಳು, ನಾಟಕದ ಮೂಲಕ ನೋಡುವಾಗ ದಕ್ಕುವ ಅನುಭವ ನಮ್ಮೊಳಗೆ ಸಂಚಲನವನ್ನು ಸೃಷ್ಟಿಸುತ್ತದೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಧನಾತ್ಮಕ ಬದಲಾವಣೆಯಾಗಲು ಸಾಧ್ಯವಿದೆ ಎಂದು ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು ಇದರ 48ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ. ಕೆ. ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025ರ ಐದು ದಿನಗಳ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.
ನಾಟಕಗಳು ನಮ್ಮೊಳಗಿನ ವಿಷಯಗಳನ್ನು ಅರ್ಥಪೂರ್ಣವಾಗಿ ಸಮಕಾಲಿನ ಅಧ್ಯಯನದ ಮೂಲಕ ಜನರಿಗೆ ತಲುಪಿಸುವ ವೇದಿಕೆಯಾಗಿದೆ. ಸಮಾಜದ ನಡುವಿನ ವಿಚಾರಗಳನ್ನು ಕಾಲದ ಹಾಗೂ ವ್ಯವಸ್ಥೆಯ ಬದಲಾವಣೆಗೆ ಪೂರಕವಾಗಿ ರೂಪಿಸಿಕೊಳ್ಳುವ ಮತ್ತು ಎಚ್ಚರಿಸುವ ಮಾಧ್ಯಮವಾಗಿದೆ. ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ಕಳೆದ ೪೮ ವ?ಗಳ ಸುಧೀರ್ಘ ಅವಧಿಯಲ್ಲಿ ಲಾವಣ್ಯವು ರಂಗ ಕ್ರಾಂತಿಯನ್ನು ಉಂಟು ಮಾಡುವ ಮೂಲಕ ಮುಂದಿನ ತಲೆಮಾರಿನ ಯುವಕಲಾವಿದರನ್ನು ಸೃಷ್ಠಿಸಿದ ಬಂದೂರಿನ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.
ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅವರಿಗೆ ಅಭಿನಂದನೆ ಹಾಗೂ ಹಿರಿಯ ಕಲಾವಿದ ಗೋವಿಂದ ಎಂ. ಮತ್ತು ಸಂಗೀತ ಕಲಾವಿದ ಹಾಲಾಡಿ ಕೃಷ್ಣ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ರಂಗಭೂಮಿ ಕಲಾವಿದೆ ಚೇತನ್ ಪ್ರಸಾದ್ ಬೆಂಗಳೂರು, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ವಿದ್ಯಾ ಅಶೋಕ ಶೇಟ್ ಉಪಸ್ಥಿತರಿದ್ದರು.
ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ವ್ಯವಸ್ಥಾಪಕ ಗಣಪತಿ ಎಸ್. ಸ್ವಾಗತಿಸಿ, ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಜಿ. ಮತ್ತು ಚೈತ್ರಾ ಯಡ್ತರೆ ನಿರೂಪಿಸಿದರು. ಮಂಜುನಾಥ ಶಿರೂರು ವಂದಿಸಿದರು. ನಂತರ ಲಾವಣ್ಯ ಕಲಾವಿದರಿಂದ ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ನಾಟಕ ಪ್ರದರ್ಶನಗೊಂಡಿತು.