ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭವು ಸಡಗರದಿಂದ ಸಂಪನ್ನಗೊಂಡಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಶ್ರೀದೇವಿ ಕಟ್ಟೆ ಅವರು ಮಕ್ಕಳಿಗೆ ಪದವಿ ಪ್ರಮಾಣಪತ್ರ ವಿತರಿಸಿ, ಮಾತನಾಡಿ, “ಮಕ್ಕಳು ದೇವರ ಉಡುಗೊರೆ, ಅವರಿಗೆ ಚಿಕ್ಕಂದಿನಿಂದಲೇ ಸಣ್ಣ-ಪುಟ್ಟ ಜವಾಬ್ದಾರಿಗಳನ್ನು ನೀಡಬೇಕು, ಆಗ ಮಾತ್ರ ತಮ್ಮ ಮುಂದಿನ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಎದೆಗುಂದದೆ ಎದುರಿಸಲು ಸಮರ್ಥರಾಗುತ್ತಾರೆ. ಮಕ್ಕಳಿಗೆ ಸ್ವನಿಯಂತ್ರಣದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಪರೀಕ್ಷೆಯ ಅಂಕಕ್ಕಿಂತ ಮೌಲ್ಯಯುತ ಜೀವನ ಬಹಳ ಮುಖ್ಯ, ಪೋಷಕರು ಮಕ್ಕಳಿಗೆ ಆಧ್ಯಾತ್ಮಿಕತೆಯ ಮಹತ್ವವನ್ನು ಸಾರುವ ಕಥೆಗಳನ್ನು ಹೇಳಿ, ಅವರಲ್ಲಿ ಆಧ್ಯಾತ್ಮಿಕತೆ ಬೆಳೆಸಬೇಕು” ಎಂದರು.
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ , “ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಪೋಷಕರ ಜವಾಬ್ದಾರಿ ಮುಗಿಯುತ್ತದೆ ಎಂದು ಭಾವಿಸದೆ, ಆ ಕ್ಷಣದಿಂದಲೇ ಪೋಷಕರ ಜವಾಬ್ದಾರಿ ಇಮ್ಮಡಿಯಾಗುತ್ತದೆಂದು ತಿಳಿಯಬೇಕು. ಸೈಕಲ್ನ ಎರಡು ಚಕ್ರಗಳು ಚಲನೆಗೆ ಹೇಗೆ ಸಹಾಯ ಮಾಡುತ್ತವೆಯೋ, ಹಾಗೆಯೇ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಇಬ್ಬರೂ ಮಹತ್ವದ ಪಾತ್ರ ವಹಿಸುತ್ತಾರೆ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯುಕೆಜಿ ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಶಿಕ್ಷಕರ ಬಗ್ಗೆ ಹಾಗೂ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸದ ಅನುಭವವನ್ನು ಭಾಷಣದ ಮೂಲಕ ಹಂಚಿಕೊಂಡರು. ಹೀಗೆ ತಮ್ಮ ಕಲಿಕೆಯ ಹಾದಿಯಲ್ಲಿನ ಅನುಭವಗಳನ್ನು ಹಂಚಿಕೊಂಡ ಪುಟಾಣಿಗಳು, ಶಿಕ್ಷಕರ ಪ್ರೇರಣೆಗೆ ಕೃತಜ್ಞತೆ ವ್ಯಕ್ತಪಡಿಸಿದರು, ಇದರೊಂದಿಗೆ ವಿದ್ಯಾರ್ಥಿಗಳ ಹಾಡು, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿತ್ತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ನಕ್ಷ್, ಆನ್ಯಾ, ಶೈರವಿ ಹಾಗೂ ರಿಷಾ ಅವರು ನಿರ್ವಹಿಸಿ, ಸಮಾರಂಭಕ್ಕೆ ವಿಶೇಷ ಲವಲವಿಕೆಯ ನಿರೂಪಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.