ವಿಶೇಷ ಚೇತನರು ನ್ಯೂನ್ಯತೆಗಳನ್ನು ಮೆಟ್ಟಿನಿಂತು ಉನ್ನತ ಸಾಧನೆ ಮಾಡಬೇಕು: ಜಿಲ್ಲಾಧಿಕಾರಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ವಿಶೇಷ ಚೇತನರು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಜೀವನ ನಡೆಸಲು ಸರಕಾರ ಹಾಗೂ ಸಂಘ-ಸಂಸ್ಥೆಗಳು ಅನೇಕ ರೀತಿಯಲ್ಲಿ ಸಹಾಯ-ಸೌಲಭ್ಯಗಳನ್ನು ನೀಡುತ್ತಿದೆ. ವಿಶೇಷ ಚೇತನರು ತಮ್ಮ ನ್ಯೂನ್ಯತೆಗಳನ್ನು ಬದಿಗೊತ್ತಿ ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡು, ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

Call us

Click Here

ಅವರು ಅಂದು ನಗರದ ಹೋಟೆಲ್ ಚಿತಾರ ಇಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನವ ಜೀವನ – ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

ವಿಶೇಷ ಚೇತನರು ದುರ್ಬಲರಲ್ಲ ಎಂಬ ಭಾವನೆ ಅವರಲ್ಲಿ ಮೂಡಿಸಲು ಸರಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೆಲವು ಸಂಸ್ಥೆಗಳು ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಯನ್ನು ಸಹ ನೀಡುತ್ತಿದೆ. ಇವೆಲ್ಲವುಗಳ ಸದುಪಯೋಗವನ್ನು ವಿಶೇಷಚೇತನರು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯವರು ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಅವಶ್ಯಕತೆಗಳನ್ನು ಪೂರೈಸಲು ತಮ್ಮ ಸಿ.ಎಸ್.ಆರ್ ನಿಧಿಯನ್ನು ಬಳಸುತ್ತಿದ್ದು, ಇಂದು ವಿಶೇಷ ಚೇತನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಗಾಲಿಕುರ್ಚಿಗಳನ್ನು ಹಾಗೂ ಶ್ರವಣ ಯಂತ್ರಗಳನ್ನು ನೀಡಲು ಬಳಸುತ್ತಿದ್ದಾರೆ. ಸಂಸ್ಥೆಯು ಇಂತಹ ಸಮಾಜಮುಖಿ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುವಂತಾಗಲಿ ಹಾಗೂ ಸೌಕರ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ ಎಂದರು.

 ಸೌಲಭ್ಯಗಳನ್ನು ಪಡೆದುಕೊಂಡ ಫಲಾನುಭವಿಗಳು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಉಪಕರಣಗಳನ್ನು ಜೋಪಾನವಾಗಿ ಇಟ್ಟುಕೊಂಡು ಸಣ್ಣ-ಪಟ್ಟ ದುರಸ್ಥಿಗಳಿದ್ದಲ್ಲಿ ಮೂಲೆಗುಂಪು ಮಾಡದೇ ಅದನ್ನು ಸರಿಪಡಿಸಿ ಮರು ಬಳಕೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ದೇಶದ ನಾಗರಿಕರಂತೆ ವಿಶೇಷ ಚೇತನರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ಸಂವಿಧಾನದ ಆಶಯ. ಅದರಂತೆ ವಿಶೇಷಚೇತನರನ್ನು ಸಬಲೀಕರಣವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಸೇವೆಯಲ್ಲಿ ಹೊಸ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಿಲ್ಲೆ ಮಹತ್ವದ ಸ್ಥಾನ ಪಡೆಯುವಂತಾಗಲಿ ಎಂದ ಅವರು, ಸಲಕರಣೆಗಳನ್ನು ಪಡೆದ ಫಲಾನುಭವಿಗಳು ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.

Click here

Click here

Click here

Call us

Call us

ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಜನರಲ್ ಮ್ಯಾನೆಜರ್ ಹೆಚ್.ಆರ್ & ಸಿ.ಎಸ್.ಆರ್ ರೊನಾಲ್ಡ್ ಡಿ ಸೋಜಾ ಯೋಜನೆಯ ಉದ್ದೇಶ ಕುರಿತು ಮಾತನಾಡಿ, 1941 ರಲ್ಲಿ 15 ಜನ ಉದ್ಯೋಗಿಗಳಿಂದ ಸ್ಥಾಪನೆಯಾದ ಮಣಿಪಾಲ್ ಟೆಕ್ನಾಲಜಿಸ್ ಸಂಸ್ಥೆಯು ಇಂದು ದೇಶದಾದ್ಯಂತ ತನ್ನ ಶಾಖೆಯನ್ನು ವಿಸ್ತರಿಸುವುದರೊಂದಿಗೆ ಹಲವಾರು ಜನರಿಗೆ ಉದ್ಯೋಗಾವಕಾಶ ನೀಡಿದೆ.

ಸಂಸ್ಥೆಯ ಸಿ.ಎಸ್.ಆರ್ ನಿಧಿಯ ಅನುದಾನವನ್ನು ಜವಾಬ್ದಾರಿಯುತವಾಗಿ ಉತ್ತಮ ಕೆಲಸ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಜಿಲ್ಲೆಯು ಶೈಕ್ಷಣಿಕವಾಗಿ ಅಗ್ರಸ್ಥಾನದಲ್ಲಿರುವ ಹಿನ್ನೆಲೆ, ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು, ಶೌಚಾಲಯ ನಿರ್ಮಾಣ, ಸ್ಮಾರ್ಟ್ಕ್ಲಾಸ್, ವಿದ್ಯಾರ್ಥಿವೇತನ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸಲು, ಕ್ಯಾನ್ಸರ್ ಪೀಡಿತ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸೇರಿದಂತೆ ಮತ್ತಿತರ ಸಂಕಷ್ಟದಲ್ಲಿರುವ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲಾಗಿದೆ ಹಾಗೂ ಜಿಲ್ಲೆಯಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಘಟಕವನ್ನು ಅಳವಡಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ವಿಕಲಚೇತನರಿಗೆ ಶಕ್ತಿ ಹಾಗೂ ಚೈತನ್ಯ ತುಂಬುವಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಣಿಪಾಲ್ ಲಿಮಿಟೆಡ್ ವತಿಯಿಂದ ನೀಡಲಾದ ಹಿಯರಿಂಗ್ ಏಡ್ ಕಿಟ್ ಅನ್ನು 14 ಜನ ಫಲಾನುಭವಿಗಳಿಗೆ ವಿತರಿಸಲಾಯಿತು, ಏಳು ಜನ ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲಾಯಿತು ಹಾಗೂ  ಸಾಧನ ಸಲಕರಣೆಯನ್ನು ನೀಡಿದ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಕೃತಜ್ಞತಾ ಪತ್ರವನ್ನು ನೀಡಲಾಯಿತು.

ಸ್ವಯಂ ಚಾಲಿತ ಬ್ಯಾಟರಿಯನ್ನು ಆಪರೇಟ್ ಮಾಡುವ ಕುರಿತು ವೀಡಿಯೋ ಮೂಲಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆಲಂದೂರು ಮಂಜುನಾಥ ಎಸ್. ಗಾಣಿಗ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Leave a Reply