ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಕರ್ತವ್ಯದಲ್ಲಿದ್ದಾಗ ಡಿ.24ರಂದು ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಅವರ ಕುಟುಂಬಕ್ಕೆ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದ ಮೂಲಕ ಭಟ್ಕಳದ ಮಾಜಿ ಸೈನಿಕರು ಹಾಗೂ ಸೇವಾನಿರತ ಸೈನಿಕರ ರೂ. 60,000ನೆರವು ನೀಡಿದರು.
ಭಟ್ಕಳದ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರ ನೇತೃತ್ವದಲ್ಲಿ ಮಾಜಿ ಸೈನಿಕ ಸಂಘದ ಸದಸ್ಯರಾದ ಹನುಮಂತ ನಾಯ್ಕ, ಕೇಶವ ನಾಯ್ಕ ಹಾಗೂ ಊರಿನ ಪ್ರಮುಖರಾದ ಭವಾನಿಶಂಕರ ನಾಯ್ಕ ಅವರು ಕುಂದಾಪುರದ ಬೀಜಾಡಿಯಲ್ಲಿನ ಹುತಾತ್ಮ ಸೈನಿಕ ಅನೂಪ್ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಧರ್ಮಪತ್ನಿ ಹಾಗೂ ಅವರ ತಾಯಿಯವರಿಗೆ ಸಾಂತ್ವನ ಹೇಳಿ, ತಲಾ 30 ಸಾವಿರದಂತೆ (ಒಟ್ಟೂ 60 ಸಾವಿರ) ಅವರ ಧರ್ಮಪತ್ನಿ ಹಾಗೂ ತಾಯಿಯವರಿಗೆ ಡಿ.ಡಿ. ಮೂಲಕ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಎಮ್ ಡಿ ಪಕ್ಕಿ ಅವರು ಪೋನ್ ಕರೆ ಮೂಲಕ ಅನೂಪ್ ಪೂಜಾರಿಯವರ ಧರ್ಮಪತ್ನಿ ಹಾಗೂ ತಾಯಿಯವರಿಗೆ ಸಾಂತ್ವನ ಹೇಳಿದರು.

ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಧರ್ಮಪತ್ನಿ ಬಿಎಸ್ಸಿ ಪದವೀಧರರಾಗಿದ್ದು, ಚಿಕ್ಕ ಮಗಳನ್ನು ಹೊಂದಿದ್ದು ಅವರ ಮುಂದಿನ ಜೀವನ ನಿರ್ವಹಣೆಗಾಗಿ ಅನುಕಂಪದ ಆಧಾರದ ಮೇಲೆ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಾಗಿ ವಿವಿಧ ಹಂತದಲ್ಲಿ ಪ್ರಯತ್ನ ನಡೆಯುತ್ತಿದ್ದು, ಈ ಕುರಿತು ಶೀಘ್ರ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಶಿಪಾರಸ್ಸು ಮಾಡುವಂತೆ ಉಡುಪಿಯ ಸಂಸದರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಮನವಿ ಪತ್ರ ನೀಡುವ ಬಗ್ಗೆಯೂ ತಿಳಿಸಲಾಯಿತು.