ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 3 ದಿನಗಳ ಪಾರಂಪರಿಕ ಯೋಗ ಶಿಬಿರವು ಇತ್ತೀಚಿಗೆ ನಡೆಯಿತು.
ಇಶಾ ಫೌಂಡೇಶನ್ ಸದ್ಗುರು ಗುರುಕುಲಂನ ಶಾಸ್ತ್ರೀಯ ಹಠ ಯೋಗದ ಶಿಕ್ಷಕರಾದ ಪ್ರವೀಣ್ ಕುಮಾರ್ ಪತಂಗಾಸನ, ಶಿಶುಪಾಲಾಸನ, ನಾಡಿ ವಿಭಜನಾಸನ, ಓಂಕಾರ ಪಠಣ ಸೂರ್ಯ ಶಕ್ತಿ ಆಸನ ಇತ್ಯಾದಿಗಳ ಕುರಿತಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಸಹಾಯಕ ಸಿಬ್ಬಂದಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಭಾರತೀಯ ಪರಂಪರೆಯಲ್ಲಿ ಯೋಗಾಭ್ಯಾಸಕ್ಕೆ ಮಹತ್ವದ ಸ್ಥಾನ ನೀಡಲಾಗಿದ್ದು, ಯೋಗವು ನಮ್ಮ ಪ್ರಾಚೀನ ಋಷಿ ಮುನಿಗಳಿಂದ – ಸಾಧು ಸಂತರಿಂದ ಆರಂಭಗೊಂಡು ಇಂದು ಬಹುಮುಖಿ ಪ್ರಯೋಜನಗಳೊಂದಿಗೆ ಸರ್ವವ್ಯಾಪಿಯಾಗಿ ಬೆಳೆದು ನಿಂತಿದೆ.
ನಿತ್ಯದ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ದೇಹ ಮತ್ತು ಮನಸ್ಸುಗಳ ಮಧ್ಯೆ ಸಮತೋಲನ ಸಾಧಿಸಿದಾಗ ಮಾತ್ರ ಮಾನವ ಆರೋಗ್ಯಪೂರ್ಣ ಜೀವನವನ್ನು ನಡೆಸಲು ಸಾಧ್ಯ. ಇಂದು ಜಗತ್ತು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಪರಿತಪಿಸುತ್ತಿದ್ದು, ನಿರಂತರ ಯೋಗಾಭ್ಯಾಸ ಈ ಸಮಸ್ಯೆಗಳಿಗೆಲ್ಲ ಪರಿಣಾಮಕಾರಿ ಪರಿಹಾರೋಪಾಯವಾಗಲಿದೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡುತ್ತ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆರೋಗ್ಯವನ್ನು ಹೊಂದುವ ಮಾರ್ಗವನ್ನು ತೋರಿಸಿಕೊಡಲು ನಿರಂತರ ಪ್ರಯತ್ನಿಸುತ್ತದೆ. ಪ್ರತಿನಿತ್ಯ ಯೋಗಶಿಕ್ಷಕರ ಮೂಲಕ ನಿಗದಿತ ವೇಳಾಪಟ್ಟಿಯಂತೆ ನಿರ್ದಿಷ್ಟ ತರಗತಿಗಳಿಗೆ ಯೋಗದ ಪಾಠವನ್ನು ನೀಡಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ನುರಿತ ತರಬೇತುದಾರರ ಮೂಲಕ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿಯನ್ನೂ ಸಹ ನೀಡಲಾಗುತ್ತಿದೆ.
ಈ ಬಾರಿ ಪತಂಗಾಸನ, ಶಿಶುಪಾಲಾಸನ, ನಾಡಿ ವಿಭಜನಾಸನಗಳ ಬಲದೊಂದಿಗೆ ಸೂರ್ಯಶಕ್ತಿಯನ್ನು ನಾವು ಪ್ರಯತ್ನಿಸಿದ್ದೇವೆ. ಸೂರ್ಯ ಶಕ್ತಿಯು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅತ್ಯುಪಯುಕ್ತ ಸಾಧನವಾಗಿದೆ. ಇದು ನಮ್ಮ ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಬಹು ಸಹಕಾರಿಯಾಗಿದೆ. ಇದು ದೈನಂದಿನ ಚಟುವಟಿಕೆಗಳಿಗೆ ಬೇಕಾದ ಜೀವಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲಿದೆ. ಎಂದು ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.