ಕುಂದಾಪುರ: ಉಡುಪಿ ರಾಜಾಂಗಣದಲ್ಲಿ ಜರುಗಲಿರುವ ಉಡುಪಿ ಜಿಲ್ಲಾ ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘ ಸಂಸ್ಥೆ ವಿಭಾಗದ ಗೌರವಕ್ಕೆ ಜಿಲ್ಲೆಯ ಅಗ್ರಮಾನ್ಯ ಸುದ್ದಿಸಂಸ್ಥೆ ‘ಕುಂದಾಪ್ರ ಡಾಟ್ ಕಾಂ’ ಪಾತ್ರವಾಗಿದೆ.
2012ರಲ್ಲಿ ಕುಂದಾಪುರ ತಾಲೂಕಿನ ಮೊದಲ ಪೂರ್ಣಪ್ರಮಾಣದ ಪೋರ್ಟೆಲ್ ಆಗಿ ಆರಂಭಗೊಂಡ ಕುಂದಾಪ್ರ ಡಾಟ್ ಕಾಂ, ಕಳೆದ ಹದಿಮೂರು ವರ್ಷಗಳಿಂದ ಸ್ಥಳೀಯ ಸುದ್ದಿ-ಮಾಹಿತಿ, ವಿಚಾರ ವೈಶಿಷ್ಟತೆಗಳನ್ನು ನಿರಂತರವಾಗಿ ಪ್ರಕಟಿಸುತ್ತಾ, ಕುಂದಾಪುರ – ಬೈಂದೂರು ತಾಲೂಕು ಹಾಗೂ ಜಿಲ್ಲೆಯಲ್ಲಿ ವಿವಿಧ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಗ್ರಾಮೀಣ ಭಾಗದ ಸಮಸ್ಯೆಗಳು, ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ನಿರಂತವಾಗಿ ಪಸರಿಸುವ ಜೊತೆಗೆ ಕುಂದಾಪ್ರ ಕನ್ನಡ ಲೇಖನ, ಅಂಕಣ ಬರಹಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜನಮಾಸನದಲ್ಲಿ ನೆಲೆಗೊಂಡಿದೆ.
ಈ ನಿರಂತರ ಸೇವೆಯನ್ನು ಗುರುತಿಸಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮೇ.01ರಂದು ನಡೆಯುವ ಉಡುಪಿ ಜಿಲ್ಲಾ ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕುಂದಾಪ್ರ ಡಾಟ್ ಕಾಂ ಸಂಸ್ಥೆಯನ್ನು ಗೌರವಿಸಲಾಗುತ್ತದೆ. ಸಂಸ್ಥೆಯ ಪರವಾಗಿ ಸಂಪಾದಕ ಸುನಿಲ್ ಬೈಂದೂರು ಅವರು ಸನ್ಮಾನವನ್ನು ಸ್ವೀಕರಿಸಲಿದ್ದಾರೆ.