ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರ್ತಗಾಳಿ ಮಠದ 550 ವರ್ಷಾಚರಣೆ ಪ್ರಯುಕ್ತ ದೇಶಾದ್ಯಂತ ಇರುವ ಮಠದ ಶಾಖೆ, ಜಿಎಸ್ಬಿ ಸಮಾಜದ ದೇವಸ್ಥಾನಗಳಲ್ಲಿ ನಡೆಯುತ್ತಿರುವ 550 ಕೋಟಿ ಶ್ರೀರಾಮ ನಾಮ ತಾರಕ ಮಂತ್ರ ಜಪಯಜ್ಞವು ಯಶಸ್ವಿಯಾಗಿ ಸಾಗುತ್ತಿದ್ದು, ಈ ಜಪಯಜ್ಞದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯುವಪೀಳಿಗೆ ಭಾಗವಹಿಸಬೇಕು. 2025ರ ಅಕ್ಟೋಬರ್ನಲ್ಲಿ ಪರ್ತಗಾಳಿಯಲ್ಲಿ 550 ಕೋಟಿ ರಾಮನಾಮ ತಾರಕ ಜಪದ ಹವನ, ಪೂರ್ಣಾಹುತಿ ನಡೆಯಲಿದ್ದು, ಜತೆಗೆ 77 ಅಡಿ ಕಂಚಿನ ಶ್ರೀರಾಮಚಂದ್ರ ದೇವರ ವಿಗ್ರಹ ಪ್ರತಿಷ್ಠಾಪನೆ ಜರುಗಲಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶ ಶ್ರೀಪಾದ ವಡೆಯರ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನೂತನ ನಿರ್ಮಾಣದ ಶ್ರೀ ವಿದ್ಯಾಧಿರಾಜ ಸಭಾಗೃಹ ಹಾಗೂ ಇತರ ನೂತನ ಕೊಠಡಿಗಳನ್ನು ಲೋಕಾರ್ಪಣೆಗೊಳಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ರಾಮನಾಮ ಅಭಿಯಾನದಿಂದ ಸಮಾಜ ಜಾಗೃತಗೊಂಡಿರುವುದು ಸಮುದಾಯಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಂತಾಗಿದೆ. ಈ ಅಭಿಯಾನದ ಅನುಭವಗಳನ್ನು ನಾವು ಜೀವನ ಪರ್ಯಂತ ಆನಂದದಿಂದ ಅನುಸರಿಸುವ ಮೂಲಕ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು. ಹಿರಿಯರಿಂದ ಬಂದ ಆಚರಣೆ, ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಸಂಜೆ ಉತ್ತರಕನ್ನಡ ಜಿಲ್ಲೆಯ ಮಂಕಿಯಿಂದ ಆಗಮಿಸಿದ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ದೇವಳಕ್ಕೆ ಕರೆತಲಾಯಿತು. ದೇವಸ್ಥಾನದ ಟ್ರಸ್ಟ್, ಪೇಟೆ ಹತ್ತು ಸಮಸ್ತರು ಹಾಗೂ ಅರ್ಚಕ ವೃಂದದವರಿಂದ ಪಾದಪೂಜೆ ನೆರವೇರಿತು. ಮೇ.26ರ ತನಕ ಸ್ವಾಮೀಜಿಯವರು ಇಲ್ಲಿ ವಾಸ್ತವ್ಯವಿರಲಿದ್ದಾರೆ.
ಗುರುವಾರ ಬೆಳಿಗ್ಗೆ ದೇವರಿಗೆ ಶತಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು. ರಾತ್ರಿ ಹನುಮಗಿರಿ ಮೇಳದವರಿಂದ ರಾಮ ರಾಮ ಶ್ರೀರಾಮ ಯಕ್ಷಗಾನ ಪ್ರದರ್ಶನಗೊಂಡಿತು. ಶುಕ್ರವಾರ ಏಕಾದಶಿ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಸಂಕೀರ್ತನೆ, ಗುರುಗಳಿಂದ ತಪ್ತ ಮುದ್ರಾಧಾರಣೆ, ಲಕ್ಷ ತುಳಸೀ ಅರ್ಚನೆ ಜರುಲಿದೆ.