ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ಕಲೆಯ ಕಲಾವಿದರು ಸಮಾಜಕ್ಕೆ ಒಳ್ಳೆಯ ಮೌಲ್ಯಗಳನ್ನು ಹಾಗೂ ಉತ್ತಮ ಸಂದೇಶಗಳನ್ನು ನೀಡುವಂತಾಗಬೇಕು. ಯಾವುದೇ ಕಲಾವಿದ ಪ್ರಸಂಗದ ಚೌಕಟ್ಟು ಮೀರಿ ವ್ಯವಹರಿಸುವುದು ಕಲೆಯ ಬೆಳವಣಿಗೆಗೆ ಮಾರಕ. ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಸಾಲಿಗ್ರಾಮ ಮಕ್ಕಳಮೇಳದ ಮೂಲಕ ಕಳೆದ ಐದು ದಶಕಗಳಿಂದ ಕಿರಿಯರಿಂದ ಹಿರಿಯರಿಗೆ ರಸದೂತಣ ನೀಡಿದ್ದಾರೆ. ಉಡುಪ ಮತ್ತು ಹಂದೆಯವರ ಬದುಕು ಎಲ್ಲರಿಗೂ ಆದರ್ಶ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಅವರು ಇಲ್ಲಿನ ಸಾಲಿಗ್ರಾಮ ಮಕ್ಕಳ ಮೇಳ ಕೋಟದ ಪಟೇಲರ ಮನೆಯಂಗಣದಲ್ಲಿ ಆಯೋಜಿಸಿದ ಉಡುಪ ಸಂಸ್ಮರಣೆ ಮತ್ತು ಉಡುಪ ಹಂದೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಜಿ. ಶಂಕರ್, ಗೀತಾನಂದ ಫೌಂಡೇಶನ್ನ ಆನಂದ ಸಿ. ಕುಂದರ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಕರ್ಣಾಟಕ ಬ್ಯಾಂಕ್ ಹಿರಿಯ ಅಧಿಕಾರಿ ವಾದಿರಾಜ್, ಮಕ್ಕಳ ಮೇಳದ ಸ್ಥಾಪಕ ಶ್ರೀಧರ ಹಂದೆ, ಟ್ರಸ್ಟಿ ಶ್ರೀಧರ ಉಡುಪ, ಕಲ್ಕೂರ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಪ್ರಾಕ್ತನ ಕಲಾವಿದ, ಮಂದರ್ತಿ ದುರ್ಗಾ ಪರಮೇಶ್ವರಿ ದೇವಳದ ಅಭಿಯಂತರ ಪ್ರದೀಪ ಶೆಟ್ಟಿ ಉಡುಪ ಸಂಸ್ಮರಣ ಮಾತುಗಳನ್ನಾಡಿದರು. ಹಿರಿಯ ಕಲಾವಿದ ಮೊಳಹಳ್ಳಿ ಕೃಷ್ಣ ಮೊಗವೀರರಿಗೆ ಉಡುಪ ಪ್ರಶಸ್ತಿ ಮತ್ತು ಆದರ್ಶ ಶಿಕ್ಷಕ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಅವರಿಗೆ ಹಂದೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಪ್ರಣೂತ್ ಗಾಣಿಗ ಮತ್ತು ಮಾಧುರಿ ಶ್ರೀರಾಮ್ ನಿರ್ವಹಿಸಿದರು. ವಿನಿತ, ಕಾವ್ಯ ಸಹಕರಿಸಿದರು.
ಆರಂಭದಲ್ಲಿ ದಿವ್ಯ ಕಾರಂತ್, ಜಯಲಕ್ಷ್ಮಿ ಕಾರಂತ್ ಗಮಕ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಬಳಿಕ ಗುರು ಪ್ರಸಾಧಿತ ಸಾಲಿಗ್ರಾಮ ಮೇಳದ ಕಲಾವಿದರಿಂದ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.















