ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ್ ಶೆಟ್ಟಿ (44) ಬಂಧಿತ ಆರೋಪಿ.
ಆರೋಪಿಗೆ 2015ರಲ್ಲಿ ಇಲ್ಲಿನ ಯುವತಿಯೊಂದಿಗೆ ವಿವಾಹವಾಗಿತ್ತು. 6 ತಿಂಗಳ ಬಳಿಕ ವರದಕ್ಷಿಣೆ ವಿಚಾರದಲ್ಲಿ ಈ ಮದುವೆ ಮುರಿದು ಬಿದ್ದಿತ್ತು ಎನ್ನಲಾಗಿದೆ. ಈ ಸಂಬಂಧ ಪತ್ನಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣಾ ಎಎಸ್ ಐ ಶಂಕರ್ಎಸ್. ಹಾಗೂ ಹೆಡ್ ಕಾನ್ ಸ್ಟೆಬಲ್ ಅಶೋಕ್ ಶೆಟ್ಟಿ ಅವರ ತಂಡವು ಈತ ಮುರ್ಷಿ ದಾಬಾದ್ ಜಿಲ್ಲೆಯ ಬನಿನಾ ಥಪುರ ಎಂಬಲ್ಲಿರುವುದನ್ನು ಪತ್ತೆ ಹಚ್ಚಿ, ಆತನನ್ನು ಬಂಧಿಸಿದ್ದಾರೆ.
ಈತ ಅಲ್ಲಿನ ಯುವತಿಯನ್ನು ಮದುವೆಯಾಗಿರುವ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕುಂದಾಪುರದ ಪ್ರಥಮ ಸಿವಿಲ್ ಹಾಗೂ ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿಯನ್ನು ಹಿರಿಯಡ್ಕದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.










