ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜೀವನದಲ್ಲಿ ನಾನಾ ರೀತಿಯ ಸವಾಲುಗಳು ಬರುವುದು ಸರ್ವೇ ಸಾಮಾನ್ಯ ಆದರೆ ಅದನ್ನು ಮೆಟ್ಟಿ ಮುಂದೆ ಸಾಗುವುದು ಜೀವನದ ಪರಮ ಗುರಿಗಳಲ್ಲೊಂದಾಗಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಹಾಗೂ ಓಂ ಫ್ರೆಂಡ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ “ಉದ್ಯೋಗ ಸಂಕಲ್ಪ” ಎಂಬ ವಿಶೇಷ ಅಭಿಯಾನದಡಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆಯ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಲಿಸ್ ಇಲಾಖೆಯಲ್ಲಿ ಸಾಕಷ್ಟು ಸವಾಲುಗಳು ಬರುತ್ತವೆ ಎಂದರೆ ಅವುಗಳು ನಮ್ಮ ನಿರೀಕ್ಷೆಯನ್ನು ಮೀರಿ ಇರುತ್ತದೆ. ಆ ಸವಾಲುಗಳು ಬಂದಾಗ ತಾಳ್ಮೆ ಸಹನೆ ಸಮಯ ಸಂದರ್ಭಕ್ಕೆ ತಕ್ಕಂತೆ ರೂಡಿಸಿಕೊಂಡಾಗ ಪೆದೆಯಾಗಿ ಸಾರ್ಥಕ್ಯ ಸೇವೆಯನ್ನು ಕಂಡಂತೆ. ಕಾನ್ಸ್ಟೇಬಲ್ ಹುದ್ದೆಯ ಬಗ್ಗೆ ತಾತ್ಸಾರದ ಮನೋಭಾವನೆ ಸಲ್ಲ ಅದರಿಂದ ಹೊರಬಂದು ಹಂತ ಹಂತವಾಗಿ ಇಲಾಖೆಯಲ್ಲಿ ಮೇಲೆತ್ತರಕ್ಕೆ ಏರಲು ಸಾಧ್ಯವಿದೆ. ಉಡುಪಿ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಹೆಚ್ಚು ಆಸಕ್ತಿ ತೊರತ್ತಿಲ್ಲ ಪರೀಕ್ಷೆಗಳಿಗೆ ಒಳಪಡುವ ಭಯದಿಂದ ನಿರಾಸಕ್ತಿ ಎದ್ದುಕಾಣುವಂತ್ತಾಗುತ್ತದೆ ತನ್ಮೂಲಕ ವಿ ಶೈನ್ ಕೊಚಿಂಗ್ ಸೆಂಟರ್ ಮಹತ್ತರವಾದ ಬದಲಾವಣೆ ಪರ್ವಕ್ಕೆ ಮುನ್ನುಡಿ ಬರೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಪೊಲೀಸ್ ಹುದ್ದೆಗೆ ಆಯ್ಕೆಯಾದ ಸಾಧಕ ಅಭ್ಯರ್ಥಿಗಳಾದ ಪ್ರೀತೇಶ್, ಪ್ರಜ್ವಲ್, ಕೃಷ್ಣ ಇವರುಗಳನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಗೌರವಪೂರ್ವಕವಾಗಿ ಸನ್ಮಾನ ನೆರವೇರಿಸಿದರು.
ಉದ್ಯೋಗ ಸಂಕಲ್ಪ ಎಂಬ ವಿಶೇಷ ಅಭಿಯಾನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನಾಲ್ಕು ನೂರುಕ್ಕೂ ಅಧಿಕ ಮಂದಿ ಭಾಗಿಯಾಗಿ ಪ್ರಯೋಜನ ಪಡೆದರು. ವಿಶೇಷವಾಗಿ ಕೋಟಿ ಚೆನ್ನಯ್ಯ ತರಬೇತಿ ಕೇಂದ್ರದ ಅಗ್ನಿವೀರರು,ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗಿಯಾದರು.
ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಉಜ್ವಲ ಅಕಾಡೆಮಿಯ ಸಂಸ್ಥಾಪಕ ಮಂಜುನಾಥ್ ಕೆ.ಯು. ಭಾಗವಹಿಸಿ ಉಚಿತ ತರಬೇತಿ ಪಡೆಯಲಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಪ್ರಮುಖ ಮಾರ್ಗದರ್ಶನ ನೀಡಿದರು.
ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್, ಚಾರ್ಟೆಡ್ ಅಕೌಂಟೆಂಟ್ ಬೆಂಗಳೂರು ಇದರ ಕಟ್ಕೇರೆ ರಾಘವೇಂದ್ರ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಹಕ್ಕಪ್ಪ ಲಮಾಣಿ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ ಎನ್., ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ದಯಾನಂದ ಬೆನ್ನೂರು, ಶ್ರೀ ಕೃಷ್ಣಕೃಪಾ ಕ್ಯಾಶ್ಯು ಇಂಡಸ್ಟ್ರೀಸ್ ಜಪ್ತಿ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿವೇಕ ಅಮೀನ್ ಸಹರಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಪ್ರಸಾದ ಬಿಲ್ಲವ ವಂದಿಸಿದರು.
















