ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ಪತ್ರಕರ್ತ, ಚಂದನ ವಾಹಿನಿಯ ವರದಿಗಾರ ಉದಯ ಪಡಿಯಾರ್ ಅವರಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
1997ರಲ್ಲಿ ಡಿಡಿ ಚಂದನ ವಾಹಿನಿ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಉದಯ ಪಡಿಯಾರ್ ಅವರು ಸತತ 23 ವರ್ಷಗಳಿಂದ ಅದೇ ವಾಹಿನಿಯಲ್ಲಿ ಮುಂದುವರಿದಿದ್ದಾರೆ. 2001ರಿಂದ 2 ವರ್ಷ ಈಟಿವಿ ಅನ್ನದಾತ ಕಾರ್ಯಕ್ರಮಕ್ಕಾಗಿಯೂ ವರದಿ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ವರದಿಗಾಗಿ ಚಂದನ ವಾಹಿನಿಯಿಂದ ಮನ್ನಣೆ ದೊರೆತಿದೆ. 1984ರಲ್ಲಿ ಧಾರವಾಡದಲ್ಲಿ ಪೋಟೋಗ್ರಫಿಯೊಂದಿಗೆ ವೃತ್ತಿ ಬದುಕು ಆರಂಭಿಸಿ ಬಳಿಕ ಸ್ವಂತ ಸ್ವುಡಿಯೋ ಆರಂಭಿಸಿದರು. ಮುಂದೆ ವೀಡಿಯೋಗ್ರಫಿಯತ್ತ ಹೊರಳಿ ಎಡಿಟಿಂಗ್ ಕೌಶಲ್ಯವನ್ನೂ ಕರಗತ ಮಾಡಿಕೊಂಡಿದ್ದಾರೆ.