ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿ ಎಂದು ಭಾವಿಸಲಾಗಿದ್ದ ಹುಲಿಕಲ್ ನಾಗಭೂಷಣ ರಾವ್ ತಮ್ಮ 105ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕೋಟೇಶ್ವರದ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ಡಾ| ವನಿತಾಲಕ್ಷ್ಮೀ ಅವರ ತಂದೆ ಹಾಗೂ ಸರ್ಜನ್ ಡಾ| ವಿಶ್ವೇಶ್ವರ ಅವರ ಮಾವನಾಗಿರುವ ಎಚ್. ನಾಗಭೂಷಣ ರಾವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲು ಶಿಕ್ಷೆ ಅನುಭವಿಸಿದವರು. ದೇಶಕ್ಕಾಗಿ ತಮ್ಮ ಉದ್ಯೋಗವನ್ನೂ ಕಳೆದುಕೊಂಡವರು. ಸಮಾಜವಾದಿಯಾಗಿ ಶಿವಮೊಗ್ಗದ ಪ್ರಮುಖ ಸಾಮಾಜಿಕ ಧುರೀಣರ ಸಾಲಿನಲ್ಲಿ ನಿಂತವರು.
ಪ್ರಧಾನಿ ಇಂದಿರಾ ಗಾಂಧಿ ಅವರಿಗೆ “ತಾಮ್ರ ಪತ್ರ” ನೀಡಿ ಸನ್ಮಾನಿಸಿದರೆ, ಕರ್ನಾಟಕ ರಾಜ್ಯಪಾಲರು ಅವರನ್ನು ಹಲವು ಬಾರಿ ಗೌರವಿಸಿದ್ದಾರೆ. ಅವರಲ್ಲಿ ಹನ್ಸರಾಜ್ ಭಾರಧ್ವಾಜ್, ಈಗಿನ ಥಾವರ್ ಚಂದ್ ಗೆಹ್ಲೋಟ್ರಿಗೆ ನಾಗಭೂಷಣ ರಾವ್ ಬಗ್ಗೆ ಅಪಾರ ಗೌರವ.
ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಶಿಕ್ಷಣ, ಉದ್ಯೋಗ, ಚಳವಳಿಗಾಗಿ ಬೆಂಗಳೂರು, ಮೈಸೂರು ತಿರುಗಿದವರು. ಸಾಲಿಗ್ರಾಮ ಕಾರ್ಕಡದ ನಿರ್ಮಲಾ ಉಪಾಧ್ಯಾಯರೊಂದಿಗೆ ವಿವಾಹವಾಗಿ ಹುಟ್ಟೂರಿನಲ್ಲಿ ಇದ್ದು, ಪ್ರಗತಿಪರ ರೈತರೆನಿಸಿಕೊಂಡರೂ, ನಂತರ ಮಕ್ಕಳ ಭವಿಷ್ಯಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದರು.
ಧಾರ್ಮಿಕ ಸಂಪ್ರದಾಯಗಳ ಆಚರಣೆ ಅಧ್ಯಯನದೊಂದಿಗೆ ಶಿಸ್ತಿನ ಜೀವನ. ಹಲವು ಉದ್ಯೋಗದಲ್ಲಿ ಅನುಭವ ಪಡೆದವರು. ವ್ಯವಹಾರವನ್ನೂ ನಡೆಸಿದವರು. ಪರೋಪಕಾರ, ದಾನ ಧರ್ಮಗಳಲ್ಲಿ ಆಸಕ್ತಿ. ಪತ್ನಿಯನ್ನು ಕಳೆದುಕೊಂಡ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಮಕ್ಕಳು ವೈದ್ಯರಾಗಿದ್ದರೂ ಅವರು ಜೀವನದಲ್ಲಿ ಔಷಧ ಸೇವಿಸಿದವರಲ್ಲ,
ಇವರದ್ದು ಯೋಗಿಯ ಜೀವನ. ಬಹು ಭಾಷಾ ಪರಿಣಿತರು. ರಾಜಕೀಯ, ಸಾಮಾಜಿಕ ವಿಷಯಗಳಲ್ಲಿ ಬಹಳ ಆಸಕ್ತಿ ಹೊಂದಿದವರು. ತಮ್ಮ ಕುಟುಂಬಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುವ ಅವರು ಅನ್ಯಾಯದ ವಿರುದ್ಧ ಜನರಿಗಾಗಿ ನ್ಯಾಯಾಲಯದಲ್ಲೂ ಹೋರಾಡಿ ಗೆದ್ದವರು. ಭ್ರಷ್ಟಾಚಾರದ ವಿರೋಧಿ, ಅನುಕರಣೀಯ ಜೀವನ ನಡೆಸಿದ ಅವರು ಜನ್ಮ ಶತಮಾನೋತ್ಸವ ಪೂರೈಸಿದ್ದರೂ ತಮ್ಮ ಕೆಲಸ ತಾವೇ ನಿರ್ವಹಿಸುವಷ್ಟು ಶಕ್ತಿವಂತರಾಗಿದ್ದರು. ಕೂಟ ಮಹಾ ಜಗತ್ತಿನ ಸದಸ್ಯರೂ ಆಗಿದ್ದ ಅವರ ಅಗಲಿಕೆ ಓರ್ವ ಆದರ್ಶ ನಾಯಕ, ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ.
















