ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಬಾರಿ ಮಳೆ ಕೊರತೆಯ ಕಾರಣಕ್ಕೆ ಶೀಘ್ರವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಈಗಿನಿಂದಲೇ ಪರಿಸ್ಥಿತಿ ಎದುರಿಸಲು ಸಿದ್ದರಾಗಿರಬೇಕು. ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಶುಕ್ರವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ವಿಧಾನಸಭ ಕ್ಷೇತ್ರ ವ್ಯಾಪ್ತಿಯ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಕಳೆದ ಬಾರಿಯೂ ಅಂತಹ ನೀರಿನ ಸಮಸ್ಯೆ ಏನು ಇರಲಿಲ್ಲ. ಈ ಬಾರಿಯೂ ಕಾಣಿಸಲ್ಲ ಅನ್ನುವ ಭರವಸೆಯಿದೆ. ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳು ವಾರಾಹಿ ನೀರನ್ನೇ ಬೇಗ ಆಶ್ರಯಿಸಿದ್ದಾರೆ. ಆದಷ್ಟು ಬಾಕಿಯಿರುವ ಜೆಜೆಎಂ, ಅಮೃತ್ ಯೋಜನೆ ಕಾಮಗಾರಿ ಮುಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕಾರ್ಯನಿರ್ವಹಿಸಿ, ನೀರಿನ ಕುರಿತಾದ ಬೇಡಿಕೆಗಳನ್ನು ಆದ್ಯತೆ ನೆಲೆಯಲ್ಲಿ ಬಗೆಹರಿಸಬೇಕು ಎಂದು ತಿಳಿಸಿದರು.

ಆವರ್ಸೆಯಲ್ಲಿ 2 ಕಡೆ ಬೋರ್ವೆಲ್ ಬೇಡಿಕೆ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ ಕುಂಭಾಸಿಯಲ್ಲಿ ಹೆದ್ದಾರಿ ಕಾಮಗಾರಿ ಯಿಂದ ಪೈಪ್ಲೈನ್ಗೆ ಹಾನಿ, ಬೇಳೂರಲ್ಲಿ ಓವರ್ ಹೆಡ್ ಟ್ಯಾಂಕ್, ಮೊಳಹಳ್ಳಿಯ ಕೋಣೆಹರ, ಹೆಬ್ಗೋಳಿಯಲ್ಲಿ ಟ್ಯಾಂಕ್ ಇದೆ. ನೀರಿನ ಸಂಪರ್ಕ ಆಗಿಲ್ಲ. ಕೆದೂರು ಹೊಸ ಟ್ಯಾಂಕ್, ಮಡಾಮಕ್ಕಿಯ ಶೇಡಿಮನೆಯಲ್ಲಿ ಬೋರ್ ವೆಲ್ ಬೇಕಿದೆ ಎಂದು ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒಗಳು ವಿವರ ನೀಡಿದರು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವಂತಹ ಮಳೆಮಾಪನ ಕೇಂದ್ರಗಳು ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಸರಿಯಾದಂತಿಲ್ಲ. ಇದರಿಂದಲೇ ಬೆಳೆ ವಿಮೆಯಡಿ ಪರಿಹಾರ ಪಡೆಯುವ ರೈತರಿಗೆ ನಷ್ಟ ಆಗುತ್ತಿದೆ. ಈ ಬಗ್ಗೆ ವಿಎಗಳು, ತಾಲೂಕು ಮಟ್ಟದ ಅಧಿಕಾರಿಗಳು ಗಮನಹರಿಸಿ, ಸರಿಪಡಿಸಿ ಎಂದು ಶಾಸಕರು ಸೂಚಿಸಿದರು.
ಕುಂದಾಪುರದಲ್ಲಿ ಈವರೆಗೆ 1,895 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 1,344 ಶೇ.20ರಷ್ಟು ಕೊರತೆಯಾಗಿದೆ. ರೈತರಿಂದ ಈವರೆಗೆ ಬೆಳೆಹಾನಿ, ನಷ್ಟದ ಬಗ್ಗೆಯಾವುದೇ ಅರ್ಜಿ ಬಂದಿಲ್ಲ, ಎಂಒ 4 ಸಹಿತ ಅಲ್ಪಾವಧಿಯ ಬಿತ್ತನೆ ಬೀಜವನ್ನು ಸಹ ದಾಸ್ತಾನು ಇರಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲೆಗಳ ಕಟ್ಟಡ ತುರ್ತು ದುರಸ್ತಿಗೆ ಅರ್ಜಿ ಸಲ್ಲಿಸಿದರೂ, ತಾಲೂಕು ಪಂಚಾಯಿತಿನಿಂದ ಯಾವುದೇ ಮಂಜೂರಾತಿ ಸಿಕ್ಕಿಲ್ಲ ಎಂದು ಬಿಇಒ ಶೋಭಾ ಶೆಟ್ಟಿ ತಿಳಿಸಿದರು. ತಾಲೂಕು ಪಂಚಾಯಿತಿ ಇಒ ಮಹೇಶ್ ಅವರು, ಸರಕಾರದಿಂದ ಅನುದಾನ ಬಂದಿಲ್ಲ ಎಂದು ಉತ್ತರಿಸಿದರು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕಾರ್ಯನಿ ರ್ವಹಣಾಧಿಕಾರಿ ರಾಮದಾಸ್, ಹೆಬ್ರಿ ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಕಾರ್ಯನಿರ್ವ ಹಣಾಧಿಕಾರಿ ಮಹೇಶ್ ಕೆ.ಜಿ. ವಂದಿಸಿದರು.
















