ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ʼವಿದ್ಯಾರ್ಥಿಗಳು, ಯುವ ಜನರು ರಾಷ್ಟ್ರೀಯ ಸಂಗೀತದ ಬಗ್ಗೆ ಒಲವು ತೋರಿಸುವಂತೆ ಅವರಿಗೆ ಪ್ರೇರಣೆ ನೀಡುವ ಅಗತ್ಯವಿದೆ. ಒಮ್ಮೆಈ ಸಂಗೀತದ ರುಚಿ ಹತ್ತಿದರೆ ಅವರೇ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಹೇಳಿದರು.
ಅವರು ಸಂಗೀತ ಭಾರತಿ ಟ್ರಸ್ಟ್ರ ರಿ. ಕುಂದಾಪುರದ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ ಗ್ರೀಷ್ಮ ಸಂಗೀತ ಮಹೋತ್ಸವ ಜ್ಯೋತಿ ಬೆಳಗಿ ಉದ್ಘಾಟಿಸಿದರು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗೀತ, ನೃತ್ಯ, ಜನಪದ ಕಲೆ ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೊಂದಾಯಿತ ಸಂಘ ಸಂಸ್ಥೆಗಳು, ವಾರ್ಷಿಕ ಲೆಕ್ಕ ಪತ್ರಗಳು ಸರಿ ಇದ್ದರೆ ವಿವಿಧ ಚಟುವಟಿಕೆ ನಡೆಸುತ್ತಿದ್ದರೆ ನೇರವಾಗಿ ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕವೇ ಕಾರ್ಯಕ್ರಮಕ್ಕಾಗಿ ನೆರವು ಕೋರಿ ಅರ್ಜಿ ಸಲ್ಲಿಸಬಹುದು. ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ರಿ. 3 ದಶಕಗಳಿಂದ ನಿರಂತರ ಕಾರ್ಯಕ್ರಮ ನಡೆಸುತ್ತಿದ್ದು, ಯುವ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ’ ಎಂದರು.
ಖ್ಯಾತ ಪಿಟೀಲು ವಾದಕಿ ಚೈತಾಲಿ ಶೇವಲಿಕರ್, ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಸಮೀರ ಕುಲಕರ್ಣಿ, ತಬಲಾ ಕಲಾವಿದ ಸುಮಿತ್ ನಾಯಕ್ ಹಾಗೂ ಹಾರ್ಮೋನಿಯಂ ಕಲಾವಿದ ಅಜಯ್ ಹೆಗ್ಡೆಯವರು ಎರಡು ಗಂಟೆಗಳ ಕಾಲ ಉತ್ತಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು. ಕಲಾವಿದೆ ಹಿರಣ್ಮಾಯಿ ಎಸ್. ತಾಳವಾದ್ಯದಲ್ಲಿ ಸಹಕರಿಸಿದರು.
ಸಂಗೀತ ಭಾರತಿ ಟ್ರಸ್ಟ್ ರಿ. ಕಾರ್ಯದರ್ಶಿ ನಾರಾಯಣ ಕೆ. ವಿಶ್ವಸ್ಥರಾದ ಎ.ಎಸ್.ಎನ್. ಹೆಬ್ಬಾರ್, ಸುಬ್ರಾಯ ಹಾಲಂಬಿ, ಸೀತಾರಾಮ ನಕ್ಕತ್ತಾಯ, ಡಾ. ಎಚ್. ಆರ್. ಹೆಬ್ಬಾರ್, ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅತಿಥಿಗಳನ್ನು ಗೌರವಿಸಿದರು.
ರಾಮಮೋಹನ ಕಾರಂತ ಮುಂಬೈ, ಕೆ. ಶಾಂತಾರಾಮ ಪ್ರಭು ಕುಂಭಾಸಿ, ಡಾ. ಕಾಶೀನಾಥ ಪೈ ಗಂಗೊಳ್ಳಿ ಕಲಾವಿದರನ್ನು ಗೌರವಿಸಿದರು.
ವಿಶ್ವಸ್ಥರಾದ ಯು. ಎಸ್. ಶೆಣೈ ಸ್ವಾಗತಿಸಿದರು. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರದ ನಿರೂಪಕಿ ಜ್ಯೋತಿ ಸಾಲಿಗ್ರಾಮ ಅತಿಥಿಗಳನ್ನು ಪರಿಚಯಿಸಿದರು. ನಾರಾಯಣ ಕುಂದಾಪುರ ವಂದಿಸಿದರು.
















