ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಾ ತಂಡಗಳು ಅನೇಕ ಸದುದ್ಧೇಶದಿಂದ ಜೀವ ತಳೆಯುತ್ತದೆ. ಆರ್ಥಿಕ ಭದ್ರತೆ ಸಿಗದ ಕಾರಣಕ್ಕಾಗಿಯೋ, ಕಲಾ ಪೋಷಕರ ಸಹಕಾರ ದೊರೆಯದ ಕಾರಣಕ್ಕಾಗಿಯೋ, ತಂಡದ ಸದಸ್ಯರ ವೈಮನಸ್ಸಿನ ಕಾರಣದಿಂದಲೋ, ಮುಖ್ಯಸ್ಥನ ದೌರ್ಬಲ್ಯದಿಂದಲೋ ಸುಭದ್ರವಾಗಿ ಸಮಾಜದಲ್ಲಿ ನಿಲ್ಲದೇ ಅಳಿಯುತ್ತದೆ. ಆದರೆ ಕಲಾಜೀವಿ ಕುಟುಂಬದ ಉತ್ಸಾಹಗಳು ನಿರಂತರವಾಗಿ 50 ಕಲಾವಿದರ ಸಂದರ್ಶನದಿಂದ ಅವಿರತವಾಗಿ ಶ್ರಮಿಸಿ ಇದೀಗ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಾಡೋಜ ಜಿ. ಶಂಕರ್ ಹೇಳಿದರು.
ಅವರು ತೆಕ್ಕಟ್ಟೆ ಹಯಗ್ರೀವದಲ್ಲಿ’ಕಲಾಜೀವಿ ನಾದನೈದಿಲೆʼಕೋಟೇಶ್ವರ ದಿ. ರವಿರಾಜ ಕೋಟೇಶ್ವರ ಅವರ ಸವಿ ನೆನಪಿನಲ್ಲಿ 50ರ ಐಸಿರಿ ಒಡ್ಡೋಲಗ ಸರಣಿ ಕಾರ್ಯಕ್ರಮಗಳ 50ರ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು. ಸಾವಿರ ಸಾವಿರ ಕನಸನ್ನು ಬಹಳ ಹಿಂದೆಯೇ ಹೊತ್ತು, ಸಾಧಿಸಿ ಇದೀಗ ಸಮಾಜಮುಖಿಯಾಗಿ ಸಂಭ್ರಮಿಸುತ್ತಿರುವುದನ್ನು ಕಂಡಾಗ ಕಲಾಜೀವಿ ಜೀವಂತವಾಗಿಯೇ ಮುಂದುವರಿಯುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಕಲಾ ಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡುತ್ತಿರೋಣ ಎಂದರು.
ಯಕ್ಷಗಾನದ ಬಡಗು ತಿಟ್ಟಿನ ಕಲಾವಿದರು ಬಡಗಿನ ಶೈಲಿಯಲ್ಲಿಯೇ ಸಾಧಿಸಿ ಬೆಳೆಯಬೇಕು. ಕಲಾವಿದನು ಕಾಣಿಸಿಕೊಳ್ಳುವ ಭರದಲ್ಲಿ ರಂಗವನ್ನು ವ್ಯತಿರಿಕ್ತವಾಗಿ ಬಳಸಿಕೊಳ್ಳಬಾರದು. ಕಲಾಜೀವಿ ನಾದನೈದಿಲೆ ಸಂಸ್ಥೆಯು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಿ ಮುಂದುವರಿಯುವ ಕಾಳಜಿಯನ್ನು ಹೊಂದುವಂತಾಗಾಲಿ ಎಂದು ಡಾ. ಆದರ್ಶ ಹೆಬ್ಬಾರ್ ಮಾತನ್ನಾಡಿದರು.
ಸಂದರ್ಶಿಸಿದ 50 ಕಲಾವಿದರನ್ನು ರಂಗದಲ್ಲಿ ಗೌರವಿಸಲಾಯಿತು. ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೆ. ಆರ್ ನಾಯ್ಕ್, ಡಾ. ಹೇಮಂತ್ ಕುಮಾರ್, ಅಶೋಕ್ ಶೆಟ್ಟಿ ಹಂದಕುಂದ, ಸೀತಾರಾಮ ಶೆಟ್ಟಿ ಮಲ್ಯಾಡಿ, ಸಕ್ಕಟ್ಟು ಮಂಜುನಾಥಯ್ಯ, ಎಚ್. ಎಸ್. ಬಸವರಾಜ್, ರಾಜೇಶ್ ಕೋಡಿ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂದರ್ಶಿತ ಕಲಾವಿದರಿಂದ ’ಯಕ್ಷಗಾನವೈಭವ’ಮತ್ತು ಯಕ್ಷಗಾನ ’ವೀರಮಣಿ ಕಾಳಗ’ ರಂಗ ಪ್ರಸ್ತುತಿಗೊಂಡಿತು.
















