ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ “ಆಸಾಡಿ ಗಮ್ಮತ್” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಥೆ ನಿರ್ದೇಶಕ ಹಾಗೂ ಕಿರುತೆರೆ ನಟ ಚೇತನ್ ನೈಲಾಡಿ ಅವರು ಆಸಾಡಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. ಆಸಾಡಿ ಹಬ್ಬದ ಆಚರಣೆ ಮತ್ತು ರೂಢಿ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಅಂಶಗಳನ್ನು ವಿದ್ಯಾರ್ಥಿಗಳಿಗೆ ಸರಳ ಉದಾಹರಣೆಗಳೊಂದಿಗೆ ವಿವರಿಸಿದರು.
ಕುಂದಾಪ್ರ ಕನ್ನಡದ ಅಸ್ಮಿತೆಯು ಅದರ ಬಳಕೆಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಅವರು ಹೇಳಿದರು. ನಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭಾಷೆ ಅತ್ಯಂತ ಸಂಪದ್ಭರಿತ ಆಸ್ತಿ. ಹಣ ಸಂಪತ್ತನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕೃತಿಯು ಯಾವುದೇ ಬೆಲೆಬಾಳುವ ಆಸ್ತಿಗಿಂತಲೂ ಮೌಲ್ಯಯುತವಾದುದು. ಅದನ್ನು ರಕ್ಷಿಸಬೇಕಾದ ತುರ್ತಿನ ಬಗ್ಗೆ ಅವರು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕರಾದ ರೇವತಿ, ವಿದ್ಯಾರ್ಥಿ ಸಂಯೋಜಕರಾದ ತೃತೀಯ ಬಿಸಿಎ ವಿದ್ಯಾರ್ಥಿಗಳಾದ ಅಕ್ಷಯ್ ಶೆಟ್ಟಿ ಮತ್ತು ಶ್ರೀರಕ್ಷಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕುಂದಾಪ್ರ ಕನ್ನಡದಲ್ಲಿ ಕವನ ವಾಚನ ಮಾಡಿದರು. ಆಸಾಡಿ ಹಬ್ಬದ ಕುರಿತಂತೆ ಕುಂದಾಪುರ ಕನ್ನಡದ ಕಿರು ನಾಟಕವನ್ನು ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಶಮಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು, ರಾಧಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕುಂದಾಪುರದ ಅಸ್ಮಿತೆಯನ್ನು ಬಿಂಬಿಸುವ “ಆಸಾಡಿ ಗಮ್ಮತ್” ಎಂಬ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸೇರಿದಂತೆ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಂದಾಪುರ ಸಮಾಜದ ಜನಜೀವನ, ರೂಢಿ, ಸಂಪ್ರದಾಯ, ಆಚಾರ ವಿಚಾರ ಹಾಗೂ ಭಾಷೆಯ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಈ ಕಾರ್ಯಕ್ರಮ ಪ್ರಭಾವಶಾಲಿಯಾಯಿತು.











