ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ನಿರ್ದೇಶಕ ಮಂಡಲ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿಗಳ ಸಹಾಯದಿಂದ ನಮ್ಮ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.
ಅವರು ಉಪ್ಪುಂದ ದೇವಕಿ ಸಭಾಭವನದಲ್ಲಿ ನಡೆದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಸೊಸೈಟಿ 2025 – 26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರದಿ ವರ್ಷದಲ್ಲಿ ರೂ.26 ಕೋಟಿ ವ್ಯವಹಾರ ನಡೆಸಿ ರೂ.29.5ಲಕ್ಷ ಲಾಭಗಳಿಸಿದೆ. ಈ ನೆಲೆಯಲ್ಲಿ ಸಂಘದ ಸದಸ್ಯರಿಗೆ ಶೇ.10.5 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.
ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕೌಸ್ತುಭ, ಸುಶನ್ ನಾರಾಯಣ ಪೂಜಾರಿ, ಪ್ರಜ್ಞಾ ಎಸ್. ಪೂಜಾರಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್. ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 95% ಅಂಕಗಳಿಸಿರುವ ಸಂಸ್ಥೆಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಆರ್. ಪೂಜಾರಿ ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು. ನಿರ್ದೇಶಕರಾದ ರಾಘವೇಂದ್ರ ಪೂಜಾರಿ ನಾರಂಬಳ್ಳಿ ದೇವನ್ ಕೆ. ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಮಾಚಯ್ಯ ಬಿಲ್ಲವ, ಗಿರೀಶ್ ಹೊಳ್ಳೆ, ರಾಮ ಗಾಣಿಗ, ಗೋವಿಂದ ಎನ್. ಪೂಜಾರಿ, ಲಾರೆನ್ಸ್ ಫೆನಾರ್ಂಡೀಸ್, ಮೂಕಾಂಬು ಪೂಜಾಗಿ, ಮಂಜುನಾಥ ರಾಮ ನಾಯ್ಡ್ ಪದ್ಮಾ ಎಚ್. ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಬಿಜೂರು ಜಯರಾಮ ಶೆಟ್ಟಿ ಸ್ವಾಗತಿಸಿದರು. ಬೈಂದೂರು ಶಾಖಾ ವ್ಯವಸ್ಥಾಪಕ ಕಾರ್ಯಕ್ರಮ ನಿರೂಪಿಸಿದರು. ತ್ರಾಸಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಆಚಾರ್ ತಗ್ಗರ್ಸೆ ವಂದಿಸಿದರು.
















