ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ, ನಾಟಕವಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕರಾವಳಿಯ ಬಡಗಿನ ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕಾಳಿಂಗ ನಾವಡ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭಾನ್ವಿತರೋರ್ವರಿಗೆ ಕಾಳಿಂಗ ನಾವಡ ಪ್ರಶಸ್ತಿಯನ್ನು ನೀಡುತಿದ್ದು, ಇಪ್ಪತ್ತೈದು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಸಹಿತ ಪ್ರಶಸ್ತಿಯು ಒಳಗೊಂಡಿರುತ್ತದೆ.
ಈ ಬಾರಿ 17ನೇ ವರ್ಷದ 2026ರ ಸಾಲಿನ ಕಲಾಕದಂಬ ಕಾಳಿಂಗ ನಾವಡ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ಯಕ್ಷಗಾನದ ಮದ್ದಲೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಸತತ 19 ವರ್ಷಗಳ ಕಾಲ ಮದ್ದಲೆಗಾರರಾಗಿ ದೇಶ ವಿದೇಶಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದ ದೇವದಾಸ ರಾವ್ ಕೂಡಿದಿ ಅವರಿಗೆ ಇದೇ ಬರುವ ಅಕ್ಟೋಬರ್ ತಿಂಗಳ 11ನೇ ತಾರೀಖಿನ ಭಾನುವಾರ ಸಂಜೆ ಬೆಂಗಳೂರಿನ ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದೆಂದು ಕಲಾಕದಂಬ ಆರ್ಟ್ ಸೆಂಟರ್ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳ ತಿಳಿಸಿದ್ದಾರೆ.
ಈವರೆಗೆ ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ. ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ, ಶಂಕರ ಭಾಗವತ ಯಲ್ಲಾಪುರ, ಬಿದ್ಕಲ್ಕಟ್ಟೆ ಕೃಷ್ಣಯ್ಯ ಆಚಾರ್ಯ, ಸುರೇಶ್ ರಾವ್ ಬಾರ್ಕೂರ್, ಕೋಟ ಶಿವಾನಂದ ಹಾಗೂ ರಾಘವೇಂದ್ರ ಮಯ್ಯ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.











