ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ರಾಮಕ್ಷತ್ರಿಯ ಸಮಾಜದ ಕಡು ಬಡವರಿಗೆ ಮನೆ ನಿರ್ಮಾಣ
ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಒಂದು ಸಮಾಜ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದ ಧಾರ್ಮಿಕ ಬೇರುಗಳು ಗಟ್ಟಿಯಾಗಿರಬೇಕು. ಧಾರ್ಮಿಕ, ಸೇವಾರಂಗದಲ್ಲಿ ಮುಂಚೂಣಿಯಲ್ಲಿರುವವರು ಸಾಮಾಜಿಕವಾಗಿಯೂ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಹೇಳಿದರು.
ಅವರು ಬೈಂದೂರು ಗ್ರಾಮದ ಬಾಡಾದಲ್ಲಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಇದರ ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ಮಿಸಲಾದ ಗೃಹವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಳದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಮೂಲಕ ನಿರಂತರವಾಗಿ ರಾಮಕ್ಷತ್ರಿಯ ಸಮಾಜದ ಕಡು ಬಡವರಿಗೆ ನೆರವಾಗುತ್ತಿರುವ ಸಾರ್ಥಕತೆ ಇದೆ. ಈವರೆಗೆ ಟ್ರಸ್ಟ್ನಿಂದ 4 ಮನೆಗಳು ನಿರ್ಮಿಸಲಾಗಿದ್ದು, ಮಾಸಿಕ ವಿಧವಾ ವೇತನ, ಬಡ ವೈದ್ಯಕೀಯ ಇಂಜಿನಿಯರಿಂಗ್ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿಧ್ಯಾರ್ಥಿ ವೇತನಗಳನ್ನು ನೀಡುವ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ ಯು. ಶುಭ ಹಾರೈಸಿದರು. ಶ್ರೀ ರಾಮ ವಿವಿಧೋದ್ದೇಶ್ ಟ್ರಸ್ಟ್ನ ಟ್ರಸ್ಟಿಗಳಾದ ಕೆ.ಜಿ. ನಾಗಪ್ಪ ಶೇರುಗಾರ್, ವೆಂಕಟರಮಣ ಬಿಜೂರು, ಜಯಾನಂದ ಹೋಬಳಿದಾರ್, ಶ್ರೀನಿವಾಸ ಬಿಜೂರು, ಶ್ರೀಧರ ಬೆಲೆಮನೆ, ರಾಮಕ್ಷತ್ರಿಯ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಹನುಮಂತ ಬೆಳ್ಕೆ, ಶ್ರೀನಿವಾಸ ಮದ್ದೋಡಿ, ಸುಧಾಕರ ಹೊಸಾಡು, ರತ್ನಾಕರ ಬಾಡ, ಶ್ರೀ ರಾಮ ಗೃಹನಿರ್ಮಾಣ ಯೋಜನೆಯ ಘಲಾನುಭವಿಗಳಾದ ತೆಕ್ಕರ್ಸನ ಮನೆ ಮಂಜುನಾಥ ಶೇರುಗಾರ್ ಹಾಗೂ ಮಂಗಳಾ ಮಂಜುನಾಥ್ ದಂಪತಿಗಳು ಉಪಸ್ಥಿತರಿದ್ದರು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಸಂಚಾಲಕ ಆನಂದ ಮದ್ದೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಕೇಶವ ನಾಯ್ಕ್ ಬಿಜೂರು ವಂದಿಸಿದರು.