ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಹಿಂದಿನ ಕಾಲದಲ್ಲಿ ಹಿರಿಯರು, ಕುಟುಂಬದ ಏಳಿಗೆಗಾಗಿ ಕುಲದೇವರ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕವೇ ಹೋಗಬೇಕಾದ ರಿವಾಜು ಹಾಗೂ ಅನಿವಾರ್ಯತೆ ಇತ್ತು. ಆದರೆ ಇಂದು ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಹಿರಿಯರ ಕಟ್ಟಿಕೊಂಡು ಸಂಪ್ರದಾಯವನ್ನು ಮುಂದುವರಿಸಿಕೊಂಡು ಊರಿನ ಸಂಕಷ್ಟಗಳು ದೂರವಾಗಿಲಿ ಎಂಬ ಸದಾಶಯದೊಂದಿಗೆ ಹಿರಿಯರು ಕಿರಿಯರೆನ್ನದೇ ಹರಿಖಂಡಿಗೆಯ ಕಾಪಾಡಿಯ ಮೂಲಸ್ಥಾನದಿಂದ ಗೋವಾ ಶ್ರೀ ಮಹಾಲಸಾ ನಾರಾಯಣಿ ದೇವಿ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದಾರೆ ಕಾಪಾಡಿಯ ಜಿಎಸ್ಬಿ ಸಮುದಾಯದ ಶೆಣೈ ಮುತ್ತು ನಾಯಕ್ ಕುಟುಂಬಿಕರು.
ಪಾದಯಾತ್ರೆಯ ನಡುವೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಾಲಯದಲ್ಲಿ ತಂಗಿದ್ದ ಯಾತ್ರಾರ್ಥಿಗಳು ಮಾತಿಗೆ ಸಿಕ್ಕರು. ಉಡುಪಿ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿ ಪೆರ್ಡೂರು ಸಮೀಪದಲ್ಲಿರುವ ಊರು ಹರಿಖಂಡಿಗೆ. ಅಲ್ಲಿಯೇ ಹತ್ತಿರದಲ್ಲಿ ಎರಡು ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮವೇ ಕಾಪಾಡಿ. ಹರಿಖಂಡಿಗೆಯ ಊರಿನ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹಾಗೂ ಕಾಪಾಡಿಯಲ್ಲಿರುವ ಪುರಾತನ ಬ್ರಹ್ಮ ಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಗೋವಾದಲ್ಲಿ ಪೋರ್ಚುಗೀಸರ ಮತಾಂತರ ನೀತಿಯನ್ನು ಸಹಿಸದೇ ವಲಸೆ ಬಂದು ಕರ್ನಾಟಕ ಹಾಗೂ ಕೇರಳದ ಕಡೆಗೆ ಬಂದ ಗೌಡ ಸಾರಸ್ವತ ಸಮಾಜದವರು ಆಯಾ ಊರಿನಲ್ಲಿ ತಮ್ಮ ಶಕ್ತಿಗನುಸಾರವಾಗಿ ನೆಲೆನಿಂತರು. ಅದೇ ರೀತಿ ಈ ಭಾಗಕ್ಕೆ ಹಲವು ಕುಟುಂಬದವರು ಹರಿಖಂಡಿಗೆಯ ಆಸು ಪಾಸು ಬಂದು ನೆಲೆ ನಿಂತರು. ಮೂಲತ ಬೇಸಾಯ ವೃತ್ತಿಯಲ್ಲಿ ತೊಡಗಿಸಿಕೊಂಡು ನಂತರದ ದಿನಗಳಲ್ಲಿ ಜೀವನೋಪಾಯಕ್ಕೆ ಅಡುಗೆಯನ್ನು ತಮ್ಮ ವೃತ್ತಿಯಾಗಿಸಿಕೊಂಡವರು.
ನಾಲ್ಕು ವರ್ಷದ ಹಿಂದೆ 2012 ರಲ್ಲಿ ಹರಿಖಂಡಿಗೆಯಿಂದ ಆಂದ್ರದ ತಿರುಪತಿಗೆ ನಡೆದುಕೊಂಡು ಹೋಗಿದ್ದ ಇಲ್ಲಿನ ಸಮಾಜ ಭಾಂದವರು ಈ ಬಾರಿ ತಾವು ಅನುಸರಿಸಿಕೊಂಡು ಬಂದ ಕುಲದೇವರ ದರ್ಶನಕ್ಕಾಗಿ ಪಾದಯಾತ್ರೆಯನ್ನು ಕೈಗೊಂಡು ಸಮಾಜದ ಯುವ ಪೀಳಿಗೆಗೆ ತಮ್ಮ ಹಳೆಯದನ್ನು ನೆನಪಿಸಿಕೊಡುವ ಪ್ರಯತ್ನದಲ್ಲಿದ್ದಾರೆ. 27 ಸದಸ್ಯರ 10 ದಿನಗಳ ಪಾದಯಾತ್ರೆ ಜೂನ್ 10ರಂದು ಹರಿಖಂಡಿಗೆಯ ಹರಿಖಂಡಿಗೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡಿದೆ. ಈ ಪಾದಯಾತ್ರೆಯಲ್ಲಿ ನಿರಂತರವಾಗಿ ಭಜನೆ, ಸಂಕೀರ್ತನೆಯ ಮೂಲಕ ಸುಮಾರು 360 ಕಿ.ಮೀ ದೂರವನ್ನು ದಿನಂಪ್ರತಿ 30-33 ಕಿ,ಮೀ ನಡೆದು ಮೊದಲೇ ನಿಗದಿ ಪಡಿಸಿದ ಊರಿನ ಜಿಎಸ್ಬಿ ಸಮಾಜದ ಹಿರಿಯರ ಹಾಗೂ ದೇವಸ್ಥಾನದಲ್ಲಿ ಉಳಿದುಕೊಂಡು ಯಾತ್ರೆಯನ್ನು ಮುಂದುವರೆಸಿ ಜೂನ್ ೨೦ಕ್ಕೆ ಮಾರ್ದೋಳ್ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನಕ್ಕೆ ತಲುಪಲಿದ್ದಾರೆ.