ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜರುಗಿದ ತಾಲ್ಲೂಕು ಅಂತರ್ ಕಾಲೇಜು ಮಟ್ಟದ ಪುಟ್ಬಾಲ್ ಪಂದ್ಯಾವಳಿಯು ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿತು.
ಪಂದ್ಯಾಟದ ಉದ್ಘಾಟನೆಯನ್ನು ಜಿಲ್ಲಾ ಕ್ರೀಡಾ ಸಂಯೋಜಕ ಶ್ರೀಧರ ಶೆಟ್ಟಿ ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಗುರುಕುಲ ಕಾಲೇಜಿನ ಪ್ರಾಂಶುಪಾಲ ಚನ್ನಬಸಪ್ಪ. ಬಿ ಇವರು ವಹಿಸಿದ್ದರು. ಅತಿಥಿಗಳಾಗಿ ನಾಗರಾಜ್ ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಗುರುಕುಲ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಸಾಯಿಜು ಕೆ. ಆರ್. ನಾಯರ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ನಾಗೇಶ್ ಸ್ವಾಗತಿಸಿದರು ಹಾಗೂ ಉಪನ್ಯಾಸಕಿ ಪವಿತ್ರಾರವರು ವಂದನಾರ್ಪಣೆ ಮಾಡಿದರು.
ಪಂದ್ಯಾಟದಲ್ಲಿ ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜಿನ ತಂಡ ಜಯಶಾಲಿಯಾಗಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಗುರುಕುಲ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟು ಶ್ರಮಿಕ್ ಬಲ್ಲಾಳ್ ಇವರು ಜಿಲ್ಲಾ ಮಟ್ಟದ ತಂಡಕ್ಕೆ ಆಯ್ಕೆಯಾಗಿರುತ್ತಾರೆ.