ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀಮಂತರು ತಮ್ಮ ಮನೆಯಲ್ಲೇ ನೀರು ಶುದ್ಧೀಕರಣ ವ್ಯವಸ್ಥೆ ಹೊಂದುತ್ತಾರೆ. ಬಡವರಿಗೆ ಆ ಸಾಮರ್ಥ್ಯ ಇಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 10 ಸಾವಿರ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಕೆಲವು ಕಡೆ ಇದು ಆರಂಭವಾಗಿದ್ದು ಹಂತಹಂತವಾಗಿ ಎಲ್ಲೆಡೆ ಸ್ಥಾಪನೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಮರವಂತೆ ಗ್ರಾಮ ಪಂಚಾಯತ್ನಲ್ಲಿ ಅವರು ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದರು. ಹೆಚ್ಚಿನ ಕಾಯಿಲೆಗಳು ಕಷ್ಮಲಯುಕ್ತ ನೀರು ಕುಡಿಯುವುದರಿಂದ ಬರುತ್ತದೆ. ಆದುದರಿಂದ ಗ್ರಾಮ ಪಂಚಾಯತ್ ಈ ಬಗ್ಗೆ ಜಾಗೃತಿ ಮೂಡಿಸಿ ಜನರು ಕುಡಿಯಲು ಈ ನೀರು ಬಳಸುವಂತೆ ಮಾಡಬೇಕು. ಪ್ರತಿದಿನ ಈ ಘಟಕದಲ್ಲಿ 8000 ಲಿಟರ್ ನೀರು ಶುದ್ಧವಾಗುತ್ತದೆ. ಒಂದು ರೂಪಾಯಿಗೆ ಹತ್ತು ಲಿಟರ್ ನೀರು ಸಿಗುತ್ತದೆ ಎಂದರು.
ಮುಂದಿನ ದಿನದಲ್ಲಿ ರೂ 20 ಕೋಟಿ ವೆಚ್ಚದಲ್ಲಿ ಮರವಂತೆ, ನಾವುಂದ, ಕಿರಿಮಂಜೇಶ್ವರ, ಹೇರೂರು ಗ್ರಾಮಗಳನ್ನು ಒಳಗೊಂಡ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಿಸಲಾಗುವುದು. ಆಗ ಪ್ರತಿ ಮನೆಗೂ ಶುದ್ಧ ನೀರು ಒದಗಿಸಲು ಸಾಧ್ಯವಾಗುತ್ತದೆ. ಮರವಂತೆಯ ಕರಾವಳಿ ಮಾರ್ಗದ ಅಭಿವೃದ್ಧಿ ಸೇರಿದಂತೆ ಅನ್ಯ ಯೋಜನೆಗಳಿಗೂ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ ಸ್ವಾಗತಿಸಿ, ವಂದಿಸಿದರು. ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜು ಅರಸು ಅವರ ೧೦೧ನೆ ಜನ್ಮದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಪೂಜಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ. ಜನಾರ್ದನ ಉಪಸ್ಥಿತರಿದ್ದರು./