ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವಸ್ಥಾನಗಳು ಜೀವನ ಪ್ರೀತಿಯನ್ನು ಕಲಿಸಿಕೊಡುವ ತಾಣಗಳು. ದೇವಸ್ಥಾನಗಳಿಂದಾಗಿ ಇಡೀ ಊರು ಒಟ್ಟುಗೂಡುವುದಲ್ಲದೇ ಸೌಹಾರ್ದಯುವತಾಗಿ ಬಾಳುವಂತೆ ಮಾಡುತ್ತದೆ. ಜೀವನ ಪ್ರೀತಿಗೆ ಬಡವ ಬಲ್ಲಿದನೆಂಬ ಭೇದವಿಲ್ಲ. ಅಲ್ಲಿ ಎಲ್ಲವನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ವಾಸ್ತುತಜ್ಞ ವೇ.ಮೂ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹೇಳಿದರು.
ಅವರು ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನವಿತ್ತರು. ಹಿಂದಿನ ಕಾಲದ ದುಸ್ತರ ಬದುಕಿನ ನಡುವೆಯೂ ಊರಿನಲ್ಲೊಂದು ಸುಂದರ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿದ್ದವು. ಆ ಕಾಲದಲ್ಲಿ ಹಸಿವು ನೀಗಿಸಿಕೊಳ್ಳಲು ಪ್ರತಿಫಲವನ್ನು ಬಯಸುತ್ತಿದ್ದರೇ ಹೊರತು ಹಣ ಮಾಡುವ ಉದ್ದೇಶ ಹೊಂದಿರಲಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದ ನಮ್ಮ ಪೂರ್ವಜರುಗಳ ಕಾರ್ಯವೈಖರಿಯನ್ನು ಹಿಂದಿನ ಕಾಲದ ದೇವಸ್ಥಾನಗಳಲ್ಲಿ ನೋಡಿದರೆ ತಿಳಿಯುವುದು ಎಂದರು.
ನಿವೃತ್ತ ಉಪನ್ಯಾಸಕ ಡಾ. ಬಿ. ಮಂಜುನಾಥ ಸೋಮಯಾಜಿ ಮಾತನಾಡಿ ದೇವಸ್ಥಾನದಲ್ಲಿ ದೇವರು ಯಾರಿಗೂ ಭೇದ ಮಾಡುವುದಿಲ್ಲ. ಸಮರ್ಪಣೆಯ ಆಧಾರದಲ್ಲಿ ಹೆಚ್ಚು ಕಡಿಮೆ ಪ್ರಮಾಣದ ಆಶಿರ್ವದಿಸುವುದಿಲ್ಲ. ಭಕ್ತಿಯಿಂದ ಸ್ಮರಿಸುವ ಎಲ್ಲರಿಗೂ ಸಮಾವಾಗಿ ಹರಸುತ್ತಾನೆ. ಸ್ಥಿರತೆ, ಕ್ಷಮೆ, ಮನೋನಿಗ್ರಹ, ನನ್ನದಲ್ಲದ ವಸ್ತುಗಳನ್ನು ಮುಟ್ಟದಿರುವುದು ಮುಂತಾದ ಸತ್ಕಾರ್ಯಗಳು ಧರ್ಮದ ಲಕ್ಷಣಗಳು. ಧರ್ಮವನ್ನು ಕ್ರೀಯಾಮಾರ್ಗ, ಭಕ್ತಮಾರ್ಗ, ರಾಜಮಾರ್ಗ ಹಾಗೂ ತತ್ವಜ್ಞಾನಿಯಂತೆ ಪಾಲಿಸುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ ದೇವಸ್ಥಾನಗಳ ಅಭಿವೃದ್ಧಿಯಿಂದ ಊರಿನ ಅಭಿವೃದ್ಧಿಯೂ ಸಾಧ್ಯವಿದೆ. ದೇವಾಲಯಗಳಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ದೇವಳದ ಜೀಣೋದ್ಧಾರಕ್ಕೆ ಸಹಕಾರವಿತ್ತ ದಾನಿಗಳನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಅನುವಂಶಿಯ ಅರ್ಚಕ ವೆಂಕಟೇಶ ಮಂಜ ದಂಪತಿಗಳನ್ನು ಗೌರವಿಸಲಾಯಿತು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ನಾಡ ಗ್ರಾಪಂ ಅಧ್ಯಕ್ಷೆ ಜೇನ್ ಮೇರಿ ಒಲಿವೆರಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚೇತನ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.
ವಿಷ್ಣುಮೂರ್ತಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಅರುಣಕುಮಾರ್ ಶೆಟ್ಟಿ ಸ್ವಾಗತಿಸಿದರು. ಪರಮೇಶ್ವರ ಉಡುಪ ಪ್ರಾರ್ಥಿಸಿದರು. ಚೇತನ ಶ್ಯಾನುಭೋಗ್ ಹಾಗೂ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು.