ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಪ್ರಸಿದ್ಧ ಚಲನಚಿತ್ರ ನಟ ರಮೇಶ ಭಟ್ ಅವರು ಬುಧವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು.
ಶಾಲೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ರಂಗದ ಬಗ್ಗೆ ಅನುಭವವನ್ನು ಹಂಚಿಕೊಂಡ ಅವರು ಶಾಲೆಯ ಉಪನ್ಯಾಸಕರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಚಲನಚಿತ್ರ ರಂಗದಲ್ಲಿ ಹೆಸರು ಪಡೆದುಕೊಂಡ ನಾನು ಉಡುಪಿ ಜಿಲ್ಲೆಯವನು ಎಂದು ಯಾರಿಗೂ ತಿಳಿದಿಲ್ಲ. ಈ ಪ್ರದೇಶಕ್ಕೆ ಬಂದು ಎಲ್ಲರೊಂದಿಗೆ ಸೇರಿ ನಮ್ಮ ಹಿಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದೇ ಒಂದು ಸಂತೋಷ. ಈ ಭಾಗದ ಜನರು ನೀಡುವ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್ಕರ್, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್, ಕಾಲೇಜಿನ ಉಪನ್ಯಾಸಕರು, ಸಹಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.