ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಥಳೀಯ ಟಾರ್ಪೆಡೋಸ್ ತಂಡದ ಆಶ್ರಯದಲ್ಲಿ ಮೂರು ದಿನಗಳಿಂದ ನಡೆದ ‘ಟಿಪಿಎಲ್-2017’ ಅಂತರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಲೆವೆನ್ ವಾರಿಯರ್ಸ್ ದುಬೈ ತಂಡ 2017 ಸಾಲಿನ ಟಿಪಿಎಲ್ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಫೈನಲಿನಲ್ಲಿ ಉಡುಪಿ ಬಾಯ್ಸ್ ತಂಡವನ್ನು ಎಂಟು ವಿಕೆಟುಗಳಿಂದ ಸೋಲಿಸಿದ ದುಬೈ ತಂಡ ರೂ. ಹತ್ತು ಲಕ್ಷ ನಗದು ಬಹುಮಾನದೊಂದಿಗೆ ಗಜಗಾತ್ರದ ಮಿನುಗುವ ಟಿಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ರನ್ನರ್ಸ್-ಅಪ್ ತಂಡ ರೂ. ಐದು ಲಕ್ಷ ನಗದಿನೊಂದಿಗೆ ಮಿನುಗುವ ಬೃಹತ್ ಟ್ರೋಫಿ ಗೆದ್ದಿತು.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಎಪ್ರಿಲ್ 14 ರಿಂದ 16 ರ ತನಕ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಹಾರ್ಡ್-ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟದಲ್ಲಿ ಶ್ರೀಲಂಕಾ, ಕತಾರ್, ಸೌದಿ ಅರೇಬಿಯಾ, ದುಬೈ ಜೊತೆಗೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 12 ಕ್ರಿಕೆಟ್ ತಂಡಗಳು ಭಾಗವಹಿಸಿ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪ್ರಶಸ್ತಿಗಾಗಿ ಸೆಣಸಿದವು.
ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿ ತಂಡ ಹತ್ತು ಓವರಿನಲ್ಲಿ 59 ರನ್ ಗಳಿಸಲಷ್ಟೇ ಯಶಸ್ವಿಯಾಯಿತು 60 ರನ್ ಗುರಿಯನ್ನು ಬೆನ್ನತ್ತಿದ ದುಬೈ ತಂಡ ಅರ್ಜುನ್ ಅವರ 33 ರನ್ ಗಳಿಕೆಯ ನೆರವಿನೊಂದಿಗೆ ಬರೀ ಎರಡೇ ವಿಕೆಟ್ ನಷ್ಟದಲ್ಲಿ ಗುರಿ ತಲುಪಿ ಚಾಂಪ್ಯನ್ಶಿಪ್ ಜಯಿಸಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಜೆಫ್ ಮಾಡೆಲ್ ಗೋವಾ ತಂಡದ ಬಂಟಿ ಪಾಟೀಲ್ ಗಳಿಸಿ ಟೊರ್ಪೆಡೋಸ್ ಬೈಕನ್ನು ಜಯಿಸಿದರು. ಟೂರ್ನಿಯ ಎರಡನೇ ದಿನ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಪೂರ್ವ ಕಾರ್ಯಕ್ರಮವೊಂದರಲ್ಲಿ ಕರಾವಳಿ ತೀರದ ಸುಮಾರು 50ಕ್ಕೂ ಹೆಚ್ಚು 80-90ರ ದಶಕದ ಮಾಜಿ ಟೆನಿಸ್ಬಾಲ್ ಕ್ರಿಕೆಟ್ ಕಲಿಗಳನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಚಾರಿತ್ರಿಕ ಕ್ಷಣವನ್ನು ಸೃಷ್ಟಿಸಿತು.
ಸಮಾರೋಪ ಸಮಾರಂಭ:
ಅಂತರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಹಾಗೂ ಆಟಗಾರರಿಗೆ ಭಾನುವಾರ ತಡ ರಾತ್ರಿ ಬಹುಮಾನ ವಿತರಿಸಿದ ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಕ್ರೀಡಾ ಪಂದ್ಯಾಟಗಳನ್ನು ಸಜ್ಜಗೊಳಿಸುವುದೆ ಅತ್ಯಂತ ಕಠೀಣವಾದ ಸವಾಲಾಗಿದೆ. ಕ್ರೀಡೆ ಹಾಗೂ ಶಿಕ್ಷಣ ಮನುಷ್ಯನ ಎರಡು ಅವಿಭಾಜ್ಯ ಅಂಗಗಳಿದ್ದಂತೆ. ಪ್ರೋತ್ಸಾಹಕರ ನೆರವಿನಿಂದ ನಡೆಯುವ ಕ್ರೀಡಾ ಪಂದ್ಯಾಟಗಳನ್ನು ಕ್ರೀಡಾಳುಗಳು ತಮ್ಮ ಯಶಸ್ಸಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪಂದ್ಯಾಟದಲ್ಲಿ ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವವನೆ ನಿಜವಾದ ಆಟಗಾರ. ಕಠಿಣವಾದ ಹಾಗೂ ನಿರಂತರವಾದ ಅಭ್ಯಾಸಗಳಿಂದ ಗುರಿಯನ್ನು ಸಾಧಿಸುವ ಅವಕಾಶಗಳು ಮುಕ್ತವಾಗಿರುತ್ತದೆ. ಪಂದ್ಯದಲ್ಲಿ ನಿಜವಾಗಿ ಗೆಲುವನ್ನು ಸಾಧಿಸುವವರು ಸಂಘಟನಾಕಾರರು ಹಾಗೂ ಪ್ರೋತ್ಸಾಹ ನೀಡಿದ ಊರಿನವರು ಎಂದು ಮೆಚ್ಚುಗೆಯ ಮಾತನ್ನು ಹೇಳಿದ ಅವರು ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮುಕ್ತ ಮನಸ್ಸಿರುವವರು ಇರುವವರೆಗೂ ಕ್ರೀಡೆ ಅಜರಾಮರವಾಗಿ ಉಳಿಯುತ್ತದೆ ಎಂದರು.
ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ, ಉದ್ಯಮಿಗಳಾದ ಗಣೇಶ ಕಿಣಿ ಬೆಳ್ವೆ, ಸದಾನಂದ ನಾವುಡ, ಪತ್ರಕರ್ತ ರಾಜೇಶ್ ಕೆ.ಸಿ, ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ನಿರ್ದೇಶಕರುಗಳಾದ ಸಬ್ಲಾಡಿ ಜಯರಾಮ್ ಶೆಟ್ಟಿ, ರಮೇಶ್ ಶೆಟ್ಟಿ, ಸಂಸ್ಥೆಯ ಪ್ರಕಾಶ ಆಚಾರ್, ಹರಿಪ್ರಸನ್ನ ಪಿ ಭಟ್, ಗೋಪಾಲ್, ನಿತ್ಯಾನಂದ ಕೆ, ಜಯಶಂಕರ, ರಜಿತ್ಕುಮಾರ ಶೆಟ್ಟಿ, ಅಮರ್, ಸುಧೀಶ್ ಕೆ.ಸಿ, ಸುಬ್ರಮಣ್ಯ ಗಾಣಿಗ, ನಿತಿನ್ ಸಾರಂಗ, ಉದಯ್ ಶೆಣೈ ಇದ್ದರು.
ಅಂತಿಮ ಹಂತವನ್ನು ಉಡುಪಿ ಬಾಯ್ಸ್ ಹಾಗೂ ದುಬೈ ವಾರಿಯರ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡ ಉಡುಪಿ ತಂಡವನ್ನು ಮಣಿಸಿ ಟಿಪಿಎಲ್-೨೦೧೭ ಅಂತರಾಷ್ಟ್ರೀಯ ಕ್ರಿಕೆಟ್ ಟ್ರೋಪಿ ಹಾಗೂ ೧೦ ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡಿದೆ. ವಿಜೇತರಿಗೆ ಸಚಿವ ಖಾದರ್ ಬಹುಮಾನವನ್ನು ವಿತರಿಸಿದರು.
ಟಾರ್ಪೆಡೋಸ್ ಸಂಸ್ಥೆಯ ಗೌರವಾಧ್ಯಕ್ಷ ವಿಜಯನಾಥ್ ಹೆಗ್ಡೆ ಸ್ವಾಗತಿಸಿದರು, ವಿಲಾಸ್ ಹೆಗ್ಡೆ ಬೆಂಗಳೂರು ನಿರೂಪಿಸಿದರು. ನಾರಾಯಣ ಶೆಟ್ಟಿ ಮಾರ್ಕೋಡು ವಂದಿಸಿದರು.
ಕುಂದಾಪುರದಲ್ಲಿ ಟಿಪಿಎಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ – http://kundapraa.com/?p=22746 .