ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು ಭಾಗದ ಕಂಬಳಗಳ ಪೈಕಿ ತಗ್ಗರ್ಸೆ ಕಂಬಳಕ್ಕೆ ತನ್ನದೇ ಆದ ಹೆಸರಿದೆ. ನೂರಾರು ವರ್ಷಗಳು ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಕಂಬಳವು ತಗ್ಗರ್ಸೆ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷ ದೇವರ ಕಾರ್ಯದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯುತ್ತದೆ. ಹಲವಾರು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸುತ್ತವೆ.
ನಾಟಿ ಮುಗಿದ ಬಳಿಕ ಕಾರ್ತಿಕ ಮಾಸದ ವೃಶ್ಚಿಕ ಸಂಕ್ರಾಂತಿಯಂದು ಸಾಂಪ್ರದಾಯಿಕ ಕಂಬಳ ನಡೆಯುತ್ತದೆ. ಕಂಬಳಕ್ಕೆ ದಿನ ನಿಗದಿಯಾದಾಗಿನಿಂದ ಕಂಬಳದ ಕೋಣಗಳ ಓಟದ ತಾಲೀಮು ಆರಂಭಗೊಳ್ಳುತ್ತದೆ. ಕಂಬಳದ ಹಿಂದಿನ ದಿನವೇ ಗದ್ದೆಯ ದ್ವಾರವನ್ನು ತೋರಣಗಳಿಂದ ಅಲಂಕರಿಸಲಾಗುತ್ತದೆ. ನಿಯಮಬದ್ಧವಾಗಿ ಖುರ್ಜು ನಿಲ್ಲಿಸಿದ ಬಳಿಕ ಯಾವುದೇ ಕೊಣಗಳನ್ನು ಗದ್ದೆಗೆ ಇಳಿಸುವಂತಿಲ್ಲ. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಡೊಲು ಬಾರಿಸುವುದು, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ)
ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ನೂರಾರು ಜೊತೆ ಕೋಣಗಳು ವರ್ಷಂಪ್ರತಿ ಆಗಮಿಸುತ್ತವೆ. ಕಂಬಳ ಗದ್ದೆಯಲ್ಲಿ ಕೆಲವರು ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಳ್ಳುತ್ತವೆ. ಊರಿನ ಎಲ್ಲಾ ಕೋಣಗಳನ್ನು ಓಡಿಸಿದ ಬಳಿಕ ಕಂಠದಮನೆಯ ಕೋಣಗಳನ್ನು ಓಡಿಸಲಾಗುತ್ತದೆ. ಸಂಪ್ರದಾಯದೊಂದಿಗೆ ಸ್ವರ್ಧೆಯನ್ನೂ ಏರ್ಪಡಿಸಲಾಗುತ್ತಿದ್ದು, ಸ್ವರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಮೂರು ಜೋಡಿ ಕೋಣಗಳಿಗೆ, ಉತ್ತಮವಾಗಿ ಕೋಣಗಳನ್ನು ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಮನೋರಂಜನೆಗಾಗಿ ಕಂಬಳಗದ್ದೆ ಓಟ ನಡೆಯುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ)
ಕಳೆದ 70 ವರ್ಷಗಳಿಂದ ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸುತ್ತಾರೆ. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು ಕಂಬಳದ ಸೊಬಗನ್ನು ಸವಿಯುತ್ತಾರೆ. ಈ ಭಾಗದ ಅನೇಕ ಗಣ್ಯರು ಕಂಬಳಕ್ಕೆ ಆಗಮಿಸಿ ಕಂಬಳದ ಮೆರಗನ್ನು ಹೆಚ್ಚಿಸುತ್ತಾರೆ.
ದೇವರ ಗದ್ದೆ. ಶುದ್ಧಾಚಾರದಲ್ಲಿ ಕೃಷಿ ಕಾರ್ಯ.
ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಗದ್ದೆಯಲ್ಲಿ ಕಂಬಳ ನಡೆಯುತ್ತಿದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಳೆಯ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯ ಇರುವುದರಿಂದ ಹತ್ತಾರು ಜೊತೆ ಎತ್ತುಗಳು (ಈಗ ಟಿಲ್ಲರ್ ಬಳಸಲಾಗುತ್ತಿದೆ), ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ. ಈ ಕಾರ್ಯ ಶುದ್ಧಾಚಾರದಲ್ಲಿ ನಡೆಯುವುದರಿಂದ ಸೂತಕವಿದ್ದವರು, ಗರ್ಭೀಣಿಯರು ಗದ್ದೆಗೆ ಇಳಿಯುವಂತಿಲ್ಲ. ಕಟಾವು ಕಾರ್ಯವು ಅಷ್ಟೇ. ಒಂದೇ ದಿನದಲ್ಲಿ ಮುಗಿಯಬೇಕು. ನಾಟಿ ಹಾಗೂ ಕಟಾವು ಕಾರ್ಯದಲ್ಲಿ ಊರಿನ ಇತರ ಕೃಷಿಕರು ಭಾಗವಹಿಸಿ ಸಾರ್ಥಕ ಭಾವ ಹೊಂದುತ್ತಾರೆ. (ಕುಂದಾಪ್ರ ಡಾಟ್ ಕಾಂ ವರದಿ)
ಡಿ.8ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ ಜರುಗಲಿದೆ.