ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕೇಂದ್ರದಲ್ಲಿ ಅಂತರಾಷ್ಟ್ರೀಯ ಐಕಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಕಲ್ಯಾಣ ಕಾರ್ಯಕ್ರಮಗಳ ಹಾಗೂ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದು, ಯಶಸ್ವೀಯಾಗಿ ಮೂರು ವರ್ಷ ಪೂರೈಸಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದರು.
ದಂಪತಿ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದಲ್ಲಿರುವ ಸರಕಾರ ಕರ್ನಾಟಕದಲ್ಲಿಯೂ ಬೇಕೆಂದು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ರಾಜ್ಯದ ಎಲ್ಲಾ ನಾಯಕರು ಏಕತೆ ಮತ್ತು ಸಕ್ರೀಯತೆಯ ಮನೋಭಾವನೆಯೊಂದಿಗೆ ಕೆಲಸ ಮಾಡಲಿದ್ದೇವೆ. ಬೇರೆ ಕಡೆಗಳಲ್ಲಿ ಬಿಕ್ಕಟ್ಟು ಹಾಗೂ ಇಕ್ಕಟ್ಟಿದ್ದರೆ, ಬಿಜೆಪಿ ನಾಯಕರಲ್ಲಿ ಹಾಗೂ ಪಕ್ಷದಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನ ಪಕ್ಷವಾಗಿ ಮುನ್ನಡೆಯುವ ಮೂಲಕ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುವುದನ್ನೇ ನಾವು ನಿರೀಕ್ಷಿಸುತ್ತಿದ್ದೇವೆ ಎಂದರು.
ದೇಶೀಯ ಗೋಸಂತತಿ ಉಳಿಸುವುದಕ್ಕೆ ಭಾರತ ಸರ್ಕಾರ ಬದ್ದವಾಗಿದೆ. ಆದರೆ ಈ ಸುತ್ತೋಲೆಯನ್ನು ವಿರೋಧಿಸುತ್ತಿರುವವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದಿಯಾಗಿ ಎಲ್ಲರೂ ಇನ್ನೊಂದು ಸಾರಿ ಓದುವುದು ಒಳ್ಳೆಯದು. ಇದರಲ್ಲಿ ಕಾನೂನು ನಿಯಮ (ಆರ್ಟಿಕಲ್) 43ರಲ್ಲಿ ಸಂವಿಧಾನ ನಿರ್ದೇಶಕ ತತ್ವಗಳಿದ್ದು, ಗೋಹತ್ಯೆ ನಿಷೇಧ ಹಾಗೂ ಗೋ ಸಂತತಿ ಉಳಿಸುವ ಬಗ್ಗೆ ಸ್ವಷ್ಟವಾಗಿ ಬರೆಯಲಾಗಿದೆ. ಅದರ ಅಡಿಯಲ್ಲಿ ಪರಿಸರ ಹಾಗೂ ಅರಣ್ಯ ಇಲಾಖೆ ಗೋಹತ್ಯಾ ನಿಷೇಧದ ಕುರಿತು ಸುತ್ತೋಲೆ ಹೊರಡಿಸಿದೆ ಎಂದರು.
ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಸೇರಿ ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದೆ. ರೈತರು ಕಾಳಸಂತೆಯಲ್ಲಿ ಅಥವಾ ಅನ್ಯಮಾರ್ಗದಲ್ಲಿ ಹೆಚ್ಚು ಹಣನೀಡಿ ಯೂರಿಯಾ, ಎಂಒಪಿ, ಡಿಎಪಿ ಗೊಬ್ಬರ ಪಡೆಯುವ ಅವಶ್ಯಕತೆಯಿಲ್ಲ. ಅಲ್ಲದೇ ಸ್ವಾತಂತ್ರ್ಯಾ ನಂತರದಲ್ಲಿ ಕೇಂದ್ರ ಸರ್ಕಾರ ಯೂರಿಯಾ, ಎಂಒಪಿ, ಡಿಎಪಿ ಗೊಬ್ಬರಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಸಚಿವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಳಕ್ಕೆ ಸ್ವಾಗತಿಸಿ ಬರಮಾಡಿಕೊಂಡರು. ವ್ಯವಸ್ಥಾಪನಾ ಸಮಿತಿ ಸದಸ್ಯ ಕೊಲ್ಲೂರು ರಮೇಶ್ ಗಾಣಿಗ ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಬಿ. ಎಂ. ಸುಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಮೀನುಗಾರಿಕಾ ಫೇಡ್ರೇಶ್ನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್ ಕಾವೇರಿ, ನಾರಾಯಣ ಶೆಟ್ಟಿ ವಂಡ್ಸೆ, ತಾಲೂಕು ರೈತಸಂಘದ ಅಧ್ಯಕ್ಷ ಎನ್. ದೀಪಕ್ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.