ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಜಡ್ಕಲ್ ಚರ್ಚ್ನಲ್ಲಿ ಉಡುಪಿ ಜಿಪಂ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಸಹಯೋಗದಲ್ಲಿ ಬೈಂದೂರು ಹೋಬಳಿ ಮಟ್ಟದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಕೃಷಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಕೃಷಿ ಇಂದು ವೈಜ್ಞಾನಿಕವಾಗಿದ್ದು ರೈತರು ಕೃಷಿ ಇಲಾಖೆಗಳ ಮಾಹಿತಿ ಪಡೆದು ಆಧುನಿಕತೆಗೆ ತಕ್ಕಂತೆ ಯಂತ್ರೋಪಕರಣವನ್ನು ಬಳಸಿಕೊಳ್ಳಬೇಕು, ಹೊಸ ಆವಿಷ್ಕಾರಗಳ ಮೂಲಕ ಯೋಜನೆ ಹಾಗೂ ಪೂರಕ ಅಂಶಗಳಿಂದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು. ಜತೆಗೆ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗದಂತೆ ತಡೆಯಬಹುದು ಎಂದು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿ, ಕೃಷಿ ಕಾರ್ಮಿಕರ ಕೊರತೆಯಿದ್ದರೆ ಇನ್ನೊಂದೆಡೆ ತಮ್ಮ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಮತ್ತು ಬೆಲೆ ಪಡೆಯಲು ಹರಸಾಹಸ ಪಡೆಯುವ ಸ್ಥಿತಿಯಲ್ಲಿದ್ದಾರೆ. ಈ ನೆಲೆಯಲ್ಲಿ ಕೃಷಿ ಸಂಬಂಧಿತ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೃಷಿಯ ಕುರಿತಾದ ಸಮಗ್ರ ಮಾಹಿತಿ, ಯೋಜನೆಗಳನ್ನು ಮನವರಿಕೆ ಮಾಡುವುದರ ಮೂಲಕ ಅವರಿಗೆ ಸ್ಪಂದಿಸಬೇಕು. ಎಂದ ಅವರು ಕೃಷಿಯಲ್ಲಿರುವ ಅನೂಕುಲತೆಗಳನ್ನು ಬಳಸಿಕೊಳ್ಳುವ ಮೂಲಕ ಕೃಷಿ ಲಾಭದಾಯಕವನ್ನಾಗಿಸಿಕೊಳ್ಳಲು ಸಾಧ್ಯ. ಈ ನೆಲೆಯಲ್ಲಿ ರೈತರು ಕೇವಲ ಒಂದೇ ಬೆಳೆಯನ್ನು ನಂಬಿಕೊಳ್ಳದೇ ಸಮಗ್ರ ಕೃಷಿಗೆ ಪೂರಕವಾದ ಉಪಕಸಬುಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಸಲಹೆ ನೀಡಿದರು.
ಬೈಂದೂರು ಕ್ಷೇತ್ರದಲ್ಲಿ ಬೇಸಿಗೆಯ ಕೊನೆಯ ಎರಡು ತಿಂಗಳು ಕೃಷಿಗಲ್ಲದೇ ಕುಡಿಯುವ ನೀರಿನ ಅಭಾವವೂ ಹೆಚ್ಚಾಗಿದೆ. ಇದರಿಂದ ಕೂಡಾ ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಸುಮುದ್ರ ಸೇರುತ್ತಿರುವ ಕ್ಷೇತ್ರದ ಐದು ನದಿಗಳ ನೀರನ್ನು ತಡೆಗಟ್ಟಲು ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೀರು ಶೇಖರಣೆಗೆ ಒತ್ತು ಕೊಟ್ಟರೆ ಕೃಷಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು. ಈ ನಿಟ್ಟಿನಲ್ಲಿ ರೈತರು, ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ತಜ್ಞರಿಂದ ಸಮಗ್ರ ಮಾಹಿತಿ ಪಡೆದು ಚರ್ಚಿಸಲಾಗುವುದು ಎಂದರು.
ಜಡ್ಕಲ್ ಗ್ರಾಪಂ ಅಧ್ಯಕ್ಷ ಅನಂತಮೂರ್ತಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕೃಷಿ ಕ್ಷೇತ್ರದ ಹಿರಿಯ ಸಾಧಕರಾದ ರಘುರಾಮ ಶೆಟ್ಟಿ ಮತ್ತು ವಿಜಯ್ ಶಾಸ್ತ್ರಿಯವರನ್ನು ಶಾಸಕರು ಸನ್ಮಾನಿಸಿದರು.
ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಸದಸ್ಯ ಪುಷ್ಪರಾಜ ಶೆಟ್ಟಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯಕ್, ಮುದೂರು ಸಹಕಾರಿ ಸಂಘದ ಅಧ್ಯಕ್ಷ ಪಿ. ಎಲ್. ಜೋಸ್, ಕೊಲ್ಲೂರು ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಮಧ್ಯಸ್ಥ, ಬ್ರಹ್ಮಾವರ ಕೃಚಿ ವಿಜ್ಞಾನಿ ಕುಮಾರ್ ಬಿ. ಬಿ. ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ವಿಠಲ ರಾವ್ ಸ್ವಾಗತಿಸಿ, ಗ್ರಾಪಂ ಸದಸ್ಯ ದೇವದಾಸ್ ವಂದಿಸಿದರು. ಸತ್ಯನಾರಾಯಣ ಅಡಿಗ ನಿರೂಪಿಸಿದರು.