ಶಿವಮೊಗ್ಗ ಲೋಕಸಭಾ ಚುನಾವಣೆ: ಶೇ. 73.59 ಮತದಾನ
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 75.29 ಮತ ಚಲಾವಣೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಂತೆ ನಡೆದ ಮತದಾನ ಪೂರ್ಣಗೊಂಡಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಅಡಚಣೆಗಳ ಹೊರತಾಗಿ ಬಹುಪಾಲು ಯಶಸ್ವಿಯಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ. 73.59ರಷ್ಟು ಮತದಾನವಾಗಿದ್ದರೇ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 75.29ರಷ್ಟು ಮತದಾನವಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೂರು ಗ್ರಾಮ ಗರಡಿಬೆಟ್ಟು ಮತದಾರರ ಮತದಾನ ಬಹಿಷ್ಕಾರ ಮುಂದಾಗಿದ್ದರಿಂದ ಮತದಾನದ ಪ್ರಮಾಣ ಕುಸಿಯಿತು. ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರ ಮಹೇಶ್ ನಾಯ್ಕ್ ಎಂಬುವರ ಹೆಸರು ಚುನಾವಣಾ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾನದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹೆಮ್ಮಾಡಿ, ವಂಡ್ಸೆ, ಹಕ್ಲಾಡಿ, ನೆಂಪು ಬೂತ್ಗಳಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಮತದಾನ ಕೊಂಚ ನಿಧಾನವಾಯಿತು.
ಹೆಮ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತಲ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಸಿಬ್ಬಂಧಿಗಳಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ತೆರೆಯಲಾಗಾಗಿದ್ದು, ವಿಶೇಷವಾಗಿ ಶೃಂಗರಿಸಲಾಗಿತ್ತು. ವಿಶೇಷ ಚೇತನರಿಗೆ ವಾಹನ ವ್ಯವಸ್ಥೆ, ಕೆಲವು ಮತದಾನ ಕೇಂದ್ರಗಳಲ್ಲಿ ವೈದ್ಯಕೀಯ ತಪಾಸಣೆ ಸೌಲಭ್ಯ, ನಕ್ಸಲ್ ಪ್ರಭಾವಿತ ಪ್ರದೇಶದಲ್ಲಿ ಮತದಾರರು ನಿರ್ಭಯವಾಗಿ ಮತದಾನ ಮಾಡಿದ್ದು, ಅರೆ ಸೇನಾಪಡೆ ನಿಯೋಜಿಸಲಾಗಿತ್ತು.
ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಚಿತ್ರನಟ ರಿಶಬ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರ ಬೆಳಿಗ್ಗೆಯೇ ಮತಚಲಾಯಿಸಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಕೇಳಿಕೊಂಡರು.