ಕುಂದಾಪುರ: ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣುವ ಸಮಾಜ ನಮ್ಮದು. ಅದರಲ್ಲೂ ಸೇವಾನಿಷ್ಠೆ ಮೆರೆದ ಶಿಕ್ಷಕರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಜತೆಗೆ ಅತ್ಯಂತ ಗೌರವದಿಂದ ಕಾಣುತ್ತದೆ. ಭಾಸ್ಕರ ಶೆಟ್ಟರು ಕೆಲಸ ಮಾಡಿದ ಎಲ್ಲ ಕಡೆ ವಿಶೇಷ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಮತ್ತು ಪೋಷಕರ ಆದರ ಗಳಿಸಿದ್ದಾರೆ. ನಿವೃತ್ತಿಯ ಸಂದರ್ಭದಲ್ಲಿ ಅರೆಹೊಳೆಯಲ್ಲಿ ಅವರಿಗೆ ದೊರೆತ ಅದ್ದೂರಿಯ ಸನ್ಮಾನ ಅದಕ್ಕೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.
ನಾವುಂದ ಗ್ರಾಮದ ಅರೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಜುಲೈ 31ರಂದು ನಿವೃತ್ತರಾದ ವಕ್ವಾಡಿ ಭಾಸ್ಕರ ಶೆಟ್ಟರಿಗೆ ಶಾಲೆಯ ಮುತ್ತಯ್ಯ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕರಾದ ಎ. ರಿಚರ್ಡ್ ರೆಬೆಲೊ, ಎಸ್. ಜನಾರ್ದನ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ಉಪನ್ಯಾಸಕ ರವಿಚಂದ್ರ ಭಾಸ್ಕರ ಶೆಟ್ಟರ ಸರಳ ವ್ಯಕ್ತಿತ್ವ, ಅಸಾಧಾರಣ ಸಂಘಟನಾ ಚಾತುರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಪ್ರಶಂಸಿಸಿದರು. ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ವಸಂತ ಶೆಟ್ಟಿ, ಹೇರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ ಶೆಟ್ಟಿ ಶುಭ ಹಾರೈಸಿದರು. ಭಾಸ್ಕರ ಶೆಟ್ಟರ ಪುತ್ರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ವಾಹಿನಿ ಶೆಟ್ಟಿ ತಂದೆ ತಮ್ಮ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿದರು.
ಶೆಟ್ಟಿ ದಂಪತಿಯನ್ನು ಶಾಲು, ಸೀರೆ, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಭಿಮಾನಿಗಳು, ಹಿಂದಿನ ವಿದ್ಯಾರ್ಥಿಗಳು ಹಾರ, ಶಾಲು, ಹೂಗುಚ್ಚ ನೀಡಿ ಗೌರವ ಸಲ್ಲಿಸಿದರು. ಭಾಸ್ಕರ ಶೆಟ್ಟಿ ಅವರು ತಮ್ಮ ನಾಲ್ಕು ದಶಕಗಳ ಶಿಕ್ಷಕ ವೃತ್ತಿಯ ನೆನಪುಗಳನ್ನು ಮೆಲುಕುಹಾಕಿ ನೆರವಾದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಆಚಾರ್ಯ, ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಮಹಾದೇವ ಮಂಜ, ಪ್ರಭಾರ ಮುಖ್ಯೋಪಾಧ್ಯಾಯ ನಾರಾಯಣ ದೇವಾಡಿಗ ವೇದಿಕೆಯಲ್ಲಿದ್ದರು. ,
ಅರೆಶಿರೂರು ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ. ಶಿವರಾಮ ಸ್ವಾಗತಿಸಿದರು. ಲೇಖಕ ಅರೆಹೊಳೆ ಸದಾಶಿವ ರಾವ್ ನಿರೂಪಿಸಿ, ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ವಂದಿಸಿದರು.