ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಹಿತಿ ಡಾ. ನಾ. ಮೊಗಸಾಲೆ ಕೃತಿಗಳು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿವೆ. ಇವರ ಬರಹಗಳು ವೈಚಾರಿಕ ದೃಷ್ಟಿಕೋನದಲ್ಲಿ ರಚನೆಗೊಳ್ಳುತ್ತವೆ ಎಂದು ಸಾಹಿತಿ ಬೆಳಗೋಡು ರಮೇಶ್ ಭಟ್ ಹೇಳಿದರು.
ಕೋಟದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಸಾಲಿಗ್ರಾಮ ಲೇಖಕರ ಹಿತರಕ್ಷಣಾ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ, ಕೋಟ ಮಿತ್ರ ಮಂಡಳಿ ಆಶ್ರಯದಲ್ಲಿ ನಡೆದ ಮೊಗಸಾಲೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಗಸಾಲೆ ಅವರ ‘ನೀಲ ಆಕಾಶ’ ಸಮಗ್ರ ಕವನ ಸಂಕಲನ ಬಿಡುಗಡೆ ಹಾಗೂ ‘ಮೊದಲ ಓದಿನ ಸುಖ’ ಮುನ್ನುಡಿಗಳ ಗುಚ್ಛವನ್ನು ಸಾಹಿತಿ ಡಾ.ಬಿ.ಜನಾನ ಭಟ್ ಮತ್ತು ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೃತಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮ ಸಂಘಟಕರು ಮೊಗಸಾಲೆ ಅವರನ್ನು ಸನ್ಮಾನಿಸಿ ಗೌರವಿಸಿದರು. ಮೊಗಸಾಲೆ ಅವರ ಗದ್ಯ ಸಾಹಿತ್ಯದ ಕುರಿತು ಡಾ.ರಾಜಶೇಖರ್ ಹಳೆಮನೆ ಮಾತನಾಡಿದರು.
ಲೇಖಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಿತ್ರಪಾಡಿ ಪ್ರೊ.ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಕುಮಾರ್ ಕೋಟ ವಂದಿಸಿದರು.