ಮರವಂತೆ: ನಡುಬೆಟ್ಟಿನ ಅಂತೋನಿ ಡಿ’ಸೋಜ ಅವರ ಮನೆಯ ಪಕ್ಕದ ಹಾಡಿಯಲ್ಲಿ ಅರಣ್ಯದಿಂದ ಬಂದಿದ್ದ ಅತಿಥಿ ಹೆಬ್ಬಾವು ಕಾಣಸಿಕ್ಕಿತು. ಅವರು ಅಲ್ಲಿ ರಾಶಿಯಾಗಿದ್ದ ತರಗೆಲೆ, ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಕಂಡುಬಂದ ಹತ್ತು ಅಡಿ ಉದ್ದದ ಮಹೋರಗದಿಂದ ಬೆಚ್ಚಿದರು. ಸುದ್ದಿ ಕೇಳಿ ನೂರಾರು ಜನ ನೆರೆದರು. ಆದರೆ ಯಾರಿಗೂ ಹತ್ತಿರ ಹೋಗುವ ಧೈರ್ಯವಾಗಲಿಲ್ಲ. ಅಷ್ಟುಹೊತ್ತಿಗೆ ಕಾರ್ಯನಿಮಿತ್ತ ಅಲ್ಲಿಗೆ ಬಂದಿದ್ದ ತಾಲೂಕು ಪಂಚಾಯತ್ ಸದಸ್ಯ ಎಸ್. ರಾಜು ಪೂಜಾರಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಶೀಘ್ರ ಸ್ಥಳಕ್ಕೆ ಬಂದ ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸ್ಥಳೀಯರ ನೆರವಿನಿಂದ ಅದನ್ನು ಹಿಡಿದು ಚೀಲಕ್ಕೆ ಹಾಕಿ ಅದನ್ನು ಕಾಲ್ತೋಡಿನ ಕೂರ್ಸೆಯ ರಕ್ಷಿತಾರಣ್ಯದಲ್ಲಿ ಬಿಡುವ ಮೂಲಕ ಈ ಅತಿಥಿಯನ್ನು ಅದರ ಸಹಜ ನೆಲೆಗೆ ತಲಪಿಸುವುದಾಗಿ ತಿಳಿಸಿ ಒಯ್ದರು.