ಕುಂದಾಪುರ, ಅ8: ಸಾಲಭಾದೆಯನ್ನು ತಾಳಲಾರದೆ ತಾಲೂಕಿನ ಅಮಾಸೆಬೈಲು ಕೆಳಾಸುಂಕದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ. ಕಾವ್ರಾಡಿ ಪಡುವಾಲ್ತೂರು ನಿವಾಸಿ ರಾಮ ಕುಲಾಲ್(45) ಅತ್ಮಹತ್ಯೆಗೆ ಶರಣಾದ ಕೃಷಿಕ.
ಪಡುವಾಲ್ತೂರಿನಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದ ರಾಮ ಕುಲಾಲ್ ಕೆಳಸುಂಕದರುವ ಕೃಷಿಭೂಮಿಯಲ್ಲಿ ತನ್ನ ಸಹೋದರನೊಂದಿಗೆ ಸೇರಿ ಭತ್ತ ಹಾಗೂ ಅಡಿಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈ ನಡುವೆ ಕೃಷಿ ಕಾರ್ಯಗಳಿಗಾಗಿ ವಿವಿಧ ಬ್ಯಾಂಕುಗಳಿಂದ ಸುಮಾರು 4ಲಕ್ಷ ಮೊತ್ತದ ಸಾಲ ಮಾಡಿದ್ದರು. ಆದರೆ ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದಾಗಿ ಉತ್ತಮ ಇಳುವರಿ ಕಾಣದೇ ನಷ್ಟ ಅನುಭವಿಸಿದ್ದರೆನ್ನಲಾಗಿದೆ. ಬ್ಯಾಂಕ್ ಸಾಲ ತೀರಿಸಲು ಒಂದೆರಡು ಸಂಘಗಳಲ್ಲಿ ಹಾಗೂ ಕೆಲವರಿಂದ ಕೈ ಸಾಲ ಪಡೆದಿದ್ದರೆನ್ನಲಾಗಿದೆ. ಆದರೆ ಇದ್ಯಾವುದೂ ಸಾಲದಿದ್ದಾಗ ಮಡದಿಯ ಕರಿಮಣಿಯನ್ನೂ ಬ್ಯಾಂಕಿನಲ್ಲಿ ಅಡವಿಡ್ಡಿದ್ದರು. ಇಷ್ಟಾದರೂ ಸಾಲ ತೀರಸಲಾಗದ್ದರಿಂದ ನೊಂದಿದ್ದ ಅವರು ಮೂರು ದಿನದ ಹಿಂದೆ ಮನೆಯಲ್ಲಿಯೇ ವಿಷ ಸೇವಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು, ರೈತ ಮೋರ್ಚಾ ಭೇಟಿ: ರೈತ ಆತ್ಮಹತ್ಯೆಯ ಬಗ್ಗೆ ತಿಳಿದ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ, ತಹಶೀಲ್ದಾರ್ ಗಾಯತ್ರಿ ನಾಯಕ್, ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಗ್ರಾಮ ಕರಣಿಕ ಅನಿಲ್ ಕುಮಾರ್ ಮೊದಲಾದವರು ರೈತನ ಮನೆಗೆ ತೆರಳಿ ಮಾಹಿತಿ ಪಡೆದಿದ್ದಾರೆ. ರಾಜ್ಯ ಬಿಜೆಪಿ ರೈತಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದ್ದಾರಲ್ಲದೇ ಸರಕಾರ ಶಿಘ್ರವೇ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.