ಕುಂದಾಪ್ರ ಡಾಟ್ ಕಾಂ ವರದಿ.
ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಬಯಲಾಟ ಯು.ಕೆ ತಂಡದಿಂದ ಹವ್ಯಾಸಿ ಕಲಾವಿದರಿಂದ, ಇಂಗ್ಲೆಂಡಿನ ಮಿಲ್ಟನ್ ಕೀನ್ಸ್ ನಗರದಲ್ಲಿ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಪ್ರದರ್ಶನ ಗೊಂಡಿತು.
ಈ ಭಾರಿ ಪ್ರದರ್ಶನಗೊಂಡ ಯಕ್ಷಗಾನ ಬ್ಯಾಲೆ ಜಟಾಯು ಮೋಕ್ಷದ ಪರಿಕಲ್ಪನೆ, ಭಾವರೂಪ, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ಉಡುಪಿ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ನಿರ್ದೇಶಕರಾದ, ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣ ಅವರ ಮಾಡಿದ್ದರು. ಅವರ ಮಗ ಶಿಶಿರ ಸುವರ್ಣ ಅದನ್ನ ಇಲ್ಲಿ ಇಂಗ್ಲಡಿನಲ್ಲಿ, ಬಯಲಾಟ ಯು.ಕೆಯ ಕೆಲಾವಿದರಿಗೆ ಬಹಳ ಶ್ರದ್ದೆ ಹಾಗೂ ತಾಳ್ಮೆಯಿಂದ ನಿರ್ದೇಶಿಸಿದರು. ಡಾ. ಗುರುಪ್ರಸಾದ್ ಪಟ್ವಾಲ್ ಹಾಗೂ ಗಿರೀಶ್ ಪ್ರಸಾದ್ ಈ ಪ್ರಯತ್ನದಲ್ಲಿ ಸಹಕಾರಿ ಆದರು. ಯಕ್ಷಗಾನ ಕಲೆಯ ಪೂರ್ವರಂಗದ ಕೋಡಂಗಿ ಹಾಗೂ ಬಾಲಗೋಪಾಲ ನೃತ್ಯದ ಸವಿಯನ್ನ ಜನರಿಗೆ ಉಣಿಸಿದರು ಬಯಲಾಟ ಯು.ಕೆಯ ಕಲಾವಿದರು.
ಸ್ಕೊಟ್ಲಾಂಡಿನ ಆಬಾರ್ದೀನಲ್ಲಿ ನೆಲೆಸಿರುವ ಮಂಗಳೂರು ಮೂಲದ ನವೀನ ಹಾಗೂ ನವ್ಯ ಕಿರೋಡಿಯನ್ ಅವರ ಸುಪುತ್ರರಾದ ತನಿಷ್ ಮತ್ತು ರಿಯಾಂಶ ಬಾಲ ಗೋಪಾಲ ನೃತ್ಯ ಮಾಡಿದರು. ಇವರು ಮುಂದೆ ಬ್ಯಾಲೆಯಲ್ಲಿ ರಾಮ, ಲಕ್ಶ್ಮಣರಾಗಿಯೂ ಮೆರೆದರು. ಡಾ ಗುರುಪ್ರಸಾದ್ ಪಟ್ವಾಲ್ ರಾವಣನಾಗಿ ರಂಗಸ್ಥಳದಲ್ಲಿ ರಂಜಿಸಿದರು. ಯಕ್ಷಗಾನ ರಂಗದಿಂದ ಮರೆಯಾಗುತ್ತಿರುವ ಬಡಗುತಿಟ್ಟಿನ ಬಣ್ಣದ ವೇಷದ ಒಡ್ಡೋಲಗವನ್ನ ರಾವಣ ವೇಷಧಾರಿ ಈ ಭಾರಿ ಮಾಡಿ ಜನರಿಗೆ ತೋರಿಸಿದರು. ಗಿರೀಶ್ ಪ್ರಸಾದರ ಜಟಾಯು ಬಹಳ ಜನ ಮನ್ನಣೆ ಪಡೆಯಿತು. ಇಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ದೀಪಾ ಪಟ್ವಾಲ್ ಮಾಯಾ ಜಿಂಕೆಯಾಗಿ ರಂಜಿಸಿದರು. ಉದ್ಯಮಿ ನಿರುಪಮಾ ಶ್ರೀನಾಥ್ ಸೀತೆಯಾಗಿ ಬಹಳ ಸುಂದರ ಅಭಿನಯ ನೀಡಿದರು. ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರ ಸುಪುತ್ರ, ಶಿಶಿರ ಸುವರ್ಣರ ಕಪಟ ಸನ್ಯಾಸಿ ಅಭಿನಯ, ಈ ಸುಂದರ ಗುರು ಪರಂಪರೆಯ ಶಕ್ತಿ ಹಾಗೂ ಸಾಧ್ಯತೆಗಳ ಪರಿಚಯ ನೀಡಿತು. ಈ ಭಾರಿ ನಿರ್ದೇಶಿಸಿದ ಶಿಶಿರ ಸುವರ್ಣರನ್ನು ಸನ್ಮಾನಿಸಿ ಗೌರವಿಸಿದರು.
ಇಂಗ್ಲೆಂಡಿನ ಬಯಲಾಟ ಯು.ಕೆ. ಯಕ್ಷಗಾನ ತಂಡ ಬೈಂದೂರು ಮೂಲದ, ಪ್ರಸ್ತುತ ಇಂಗ್ಲೆಂಡಿನ ಡೋಂಕಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಡಾ. ಗುರುಪ್ರಸಾದ್ ಪಟ್ವಾಲ್ ಅವರು ಪ್ರಾರಂಭಿಸಿ, ನಡೆಸಿಕೊಂಡು ಬರುತ್ತಿರುವ ಹವ್ಯಾಸಿ ಯಕ್ಷಗಾನ ತಂಡ. ಮಾರಣಕಟ್ಟೆ ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಧರ ಗಾಣಿಗ ಅವರು ಬಯಲಾಟ ಯು.ಕೆಯ ವಿದ್ಯಾರ್ಥಿಗಳಿಗೆ ಪ್ರಥಮ ಗುರುಗಳಾದರು. ಆನ್ಲೈನ್ ಕ್ಲಾಸು ನಡೆಸಲು, ಹಾಗೂ ವೇಷ ಭೂಷಣ ಒದಗಿಸಲು ಸಹಾಯ ಮಾಡಿದರು. ಶ್ರೀಧರ ಗಾಣಿಗರ ತಾಳ್ಮೆಯ ಯಕ್ಷಗಾನ ಶಿಕ್ಷಣದಿಂದ, ಇಲ್ಲಿನ ವಿದ್ಯಾರ್ಥಿಗಳು ಬಹಳ ಶ್ರದ್ದೆಯಿಂದ ಕಲಿತು, ಯಕ್ಷಗಾನ ಪ್ರದರ್ಶನ ಮಾಡಲು ಸಮರ್ಥರಾದರು. ಬಯಲಾಟ ಯು.ಕೆಯ ವಿದ್ಯಾರ್ಥಿ, ಇಂಗ್ಲೆಂಡಿನಲ್ಲಿ ನೆಲೆಸಿರುವ ಗಿರೀಶ್ ಪ್ರಸಾದ್ ಅವರು ಶ್ರೀಧರ ಗಾಣಿಗರಿಗೂ, ಡಾ. ಗುರುಪ್ರಸಾದ್ ಪಟ್ವಾಲರಿಗೂ ಈ ಕ್ಲಾಸುಗಳನ್ನ ನಡೆಸುವಲ್ಲಿ ಬಹಳ ಸಹಕರಿಸಿದರು. ಅವರ ಜೊತೆ, ವಿಮಾನ ತಂತ್ರಜ್ಞ ಯೋಗಿಂದ್ರ ಮರವಂತೆ ಅವರು ಹಲವು ಕಾರ್ಯಕ್ರಮದಲ್ಲಿ ಭಾಗಿಯಾದರು.
ಕೊರೋನಾ ವೈರಸ್ ಮೊದಲ ಭಾರಿಗೆ ಭಾರತದಲ್ಲಿ ಹಬ್ಬಿದಾಗ, ಹಲವು ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದರು. ಅವರಿಗೆ ಸಹಾಯವಾಗಲೆಂದು, ಇಲ್ಲಿ ಯಕ್ಷಗಾನ ತರಭೇತಿಯನ್ನು ಆನ್ಲೈನ್ ಮೂಲಕ ಈ ಬಯಲಾಟ ಯು.ಕೆ ಹೆಸರಿನಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಪ್ರಾರಂಭಿಸಿದರು. ಈ ಕ್ಲಾಸುಗಳು ಸಂಗ್ರಹಿಸಿದ ಹಣವನ್ನ ಊರಿನಲ್ಲಿ ಕಷ್ಟದಲ್ಲಿದ್ದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಒದಗಿಸಿದರು. ಬಯಲಾಟ ಯು.ಕೆ. ಇಂಗ್ಲೆಂಡಿನಲ್ಲಿ ಹಲವಡೆ ಯಕ್ಷಗಾನವನ್ನ ಪ್ರದರ್ಶಿಸಿರುವ ಹಾಗೂ ಅಂತಾರಾಷ್ಟ್ರೀಯ ಕಲಾ ಸಮ್ಮೇಳನಗಲ್ಲಿ ರ್ನಾಟಕದ ಕಲೆಯನ್ನ ಮೊದಲ ಭಾರಿಗೆ ಪ್ರದರ್ಶಿಸಿದೆ.