ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರಾಟೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಮತ್ತು ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಕರಾಟೆ ಕಲೆಯನ್ನು ಕಲಿಯಲು ಉತ್ಸಾಹ ತೋರಬೇಕು. ಇದರಿಂದ ನಮ್ಮಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕೋಡಿ ವಿಠಲ ಕಾಮತ್ ಹೇಳಿದರು.
ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಫಿನಿಕ್ಸ್ ಅಕಾಡೆಮಿ ಇಂಡಿಯಾ ವತಿಯಿಂದ ಗಂಗೊಳ್ಳಿಯಲ್ಲಿ ಕರಾಟೆ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಮ್ಮಾಡಿ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರಾಘವೇಂದ್ರ ಪೈ, ಹೆಮ್ಮಾಡಿ ಜನತಾ ಹೈಸ್ಕೂಲಿನ ಉಪನ್ಯಾಸಕ ಜಗದೀಶ ಶೆಟ್ಟಿ, ಉದ್ಯಮಿ ಸಂತೋಶ ಗುಡ್ರಿ ಶುಭ ಹಾರೈಸಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ರಾಘವೇಂದ್ರ ಖಾರ್ವಿ (ಇಂದ), ರಾಘವೇಂದ್ರ ಖಾರ್ವಿ, ವೆಂಕಟೇಶ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕರಾಟೆ ಶಿಕ್ಷಕ ಅಕ್ಷಯ್ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಸಂತೋಷ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು.