ಶೀಘ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿ: ಪ್ರತಿಭಟನೆಯಲ್ಲಿ ಡಿವೈಎಫ್ಐ, ಜನವಾದಿ ಮಹಿಳಾ ಸಂಘಟನೆ ಆಗ್ರಹ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾಡ ಗ್ರಾಮದ ವಿವಿದೆಡೆಗೆ ಸರಕಾರಿ ಬಸ್ಸು ಓಡಿಸಲು ಹಾಗೂ ಮರವಂತೆ ಮಹಾರಾಜ ಸ್ವಾಮಿ ಬಳಿ ಬಸ್ ನಿಲುಗಡೆಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾ.ಪಂ ಎದುರು ಪ್ರತಿಭಟನೆ ಜರುಗಿತು.

Call us

Click Here

ಈ ವೇಳೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಏಕಸ್ವಾಮ್ಯದಿಂದಾಗಿ ಸರಕಾರಿ ಬಸ್ಗಳ ಸಂಖ್ಯೆ ಕಡಿಮೆಯಿದೆ. ಖಾಸಗಿ ಬಸ್ ಮಾಲಕರು ಅವಿಭಜಿತ ದ.ಕ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ. ನಾಡ-ಪಡುಕೋಣೆಯಲ್ಲಿ ಎದ್ದ ಸರಕಾರಿ ಬಸ್ ವಿಚಾರದ ಧ್ವನಿ ಇಡೀ ಕರಾವಳಿ ಹೆಣ್ಣುಮಕ್ಕಳ ಪರವಾದ ಧ್ವನಿಯಾಗಬೇಕು. ಇದು ಆರಂಭದ ಹೋರಾಟವಾಗಿದ್ದು ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ, ಆ ಬಳಿಕವೂ ಈಡೇರದಿದ್ದರೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಕಚೇರಿ ಎದುರು ಧರಣಿ ಕುಳಿತುಕೊಳ್ಳಲಾಗುವುದು ಎಂದರ.

ಸಾರಿಗೆ ಅವ್ಯವಸ್ಥೆಯ ವಿರುದ್ದ ಡಿವೈಎಫ್ಐ ಸಂಘಟನೆ ನಾಲ್ಕು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದೆ. ಖಾಸಗಿ ಬಸ್ಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದು ಕೂಡ ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಸಂಚರಿಸುವ ಕೂಲಿ ಕಾರ್ಮಿಕರು, ಮಹಿಳೆಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಗ್ರಾಮೀಣ ಭಾಗಗಳಿಗೆ ಭಾಗಶಃ ಸರಕಾರಿ ಬಸ್ಸು ಸೌಕರ್ಯ ನೀಡಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದರು.

ಪ್ರತಿಭಟನಾಕಾರರ ಆಕ್ರೋಶ:
ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಊರುಗಳು ಬಸ್ ಸೌಲಭ್ಯದಿಂದ ವಂಚಿತವಾಗಿದೆ. ನಾಡ ಗ್ರಾಮದ ಕೋಣ್ಕಿ ಪ್ರದೇಶ, ಬಡಾಕೆರೆ ಗ್ರಾಮ ಮತ್ತು ಹಡವು ಗ್ರಾಮದ ಜನರು ಖಾಸಗಿ ಹಾಗೂ ಸರ್ಕಾರಿ ಬಸ್ಸಿನ ಸೌಕರ್ಯ ಇಲ್ಲದೇ ಪರದಾಡಬೇಕಾಗಿದೆ. ಈ ಭಾಗದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುತ್ತಾರೆ. ದುಡಿಯುವ ವರ್ಗದ ಜನ, ಕೃಷಿಕರು ಎಲ್ಲರೂ ಬಸ್ಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಭಾಗದ ಜನರು ಬಸ್ಸಿಗಾಗಿ 5-6 ಕಿಲೋ ಮೀಟರ್ ದೂರ ರಿಕ್ಷಾ ಅಥವಾ ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಈ ಪ್ರದೇಶಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಓಡಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಈ ಭಾಗಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸಿನ ಸೇವೆಯು ನಿಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ವೇಳೆ ಕುಂದಾಪುರ, ಸೇನಾಪುರ, ನಾಡಗುಡ್ಡೆಯಂಗಡಿ, ಕೋಣ್ಕಿ, ಬಡಾಕೆರೆ, ನಾವುಂದದಿಂದ ಬೈಂದೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಮಾರ್ಗಸೂಚಿಸಿ ಪರ್ಮೀಟ್ ನೀಡಿ ಬಸ್ಸನ್ನು ಓಡಿಸುವುದು, ಕುಂದಾಪುರ, ಸೇನಾಪುರ, ನಾಡ, ಹಡವು, ಮಹಾರಾಜ ಸ್ವಾಮಿಯಿಂದ, ಬೈಂದೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಮಾರ್ಗಸೂಚಿಸಿ ಪರ್ಮೀಟ್ ನೀಡಿ ಬಸ್ಸನ್ನು ಓಡಿಸುವುದು. ಮರವಂತೆ ಗ್ರಾಮದ ಮಹಾರಾಜ ಸ್ವಾಮಿ ಎಂಬ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳದಲ್ಲಿ ಕೆ.ಎಸ್.ಆರ್.ಟಿ.ಸಿ.ಯ ಎಲ್ಲಾ ಬಸ್ಸುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವುದು ಮೊದಲಾದ ಬೇಡಿಕೆಯನ್ನು ಮುಂದಿಡಲಾಯಿತು.

Click here

Click here

Click here

Click Here

Call us

Call us

ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಾಡ ಗ್ರಾ.ಪಂ. ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು. ಡಿವೈಎಫ್ಐ ಬೈಂದೂರು ತಾಲೂಕು ಅಧ್ಯಕ್ಷ ವಿಜಯ್ ಕೊಯನಗರ, ಪಡುಕೋಣೆ ಘಟಕದ ಉಪಾಧ್ಯಕ್ಷ ನಾಗರಾಜ ಕುರು, ಮುಖಂಡರಾದ ಸುರೇಶ್ ಕಲ್ಲಾಗರ, ರಾಜು ಪಡುಕೋಣೆ, ವೆಂಕಟೇಶ ಕೋಣಿ, ಎಚ್. ನರಸಿಂಹ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಮುಖಂಡರಾದ ಸುಶೀಲಾ ನಾಡ, ನಾಗರತ್ನಾ ಪಡುವರಿ, ಗ್ರಾ.ಪಂ ಸದಸ್ಯೆ ಶೋಭಾ, ಸಿಐಟಿಯು ಮುಖಂಡ ರಾಜೇಶ್ ರೊನಾಲ್ಡ್, ಸ್ಥಳೀಯರಾದ ಪಿಲಿಫ್ ಡಿಸಿಲ್ವಾ ಇದ್ದರು.

Leave a Reply