ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯೋಗ ಮನುಷ್ಯನ ಶರೀರ ಮತ್ತು ಮನಸ್ಸನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗುತ್ತದೆ. ಯೋಗವನ್ನು ಪ್ರಾಣಯಾಮ, ದೈಹಿಕ ಕಸರತ್ತು ಎನ್ನುವ ಸೀಮಿತ ಅರ್ಥದಲ್ಲಿ ಗ್ರಹಿಸದೆ, ಅದು ಬದುಕಿನ ಸರ್ವಾಂಗೀಣ ವಿಕಸನಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿಯಬೇಕು. ಯೋಗ ಆತ್ಮ ದರ್ಶನಕ್ಕೆ ಹೊರತು ಪ್ರದರ್ಶನಕ್ಕೆ ಅಲ್ಲ ಎಂದು ನಿವೃತ್ತ ಶಿಕ್ಷಕ, ಯೋಗ ತರಬೇತುದಾರ ಕರುಣಾಕರ ಶೆಟ್ಟಿ ಕಟ್ಕೇರಿ ಹೇಳಿದರು.
ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಎನ್.ಸಿ.ಸಿ. ಘಟಕ ಹಾಗೂ ಯೋಗ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಕೋರ್ಸ್ನ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿಶ್ವಯೋಗ ದಿನʼವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭ ಯೋಗದಿಂದಾಗುವ ಪ್ರಯೋಜನಗಳನ್ನು ತಿಳಿಸಿ, ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು.
ಯೋಗ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಕೋರ್ಸಿನ ಸಂಯೋಜಕರಾದ ರೇವತಿ ಡಿ. ಅತಿಥಿಗಳನ್ನು ಪರಿಚಯಿಸಿದರು. ಎನ್.ಸಿ.ಸಿ. ಕೇರ್ ಟೇಕರ್ ಹರೀಶ್ ಬಿ. ವಂದಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕ ಪ್ರತಿನಿಧಿ ವೈಷ್ಣವಿ ಎಮ್.ಎಸ್. ಪ್ರಾರ್ಥಿಸಿದರು.