ಆಳುವ ಜನರಲ್ಲಿ ಹಾಸ್ಯಪ್ರಜ್ಞೆ ಸತ್ತು ಹೋಯಿತೇ ?

Call us

Call us

Call us

ಎ. ಎಸ್. ಎನ್. ಹೆಬ್ಬಾರ್

Call us

Click Here

ಹಾಸ್ಯ ಇಲ್ಲದೇ ಬದುಕೇ ಇಲ್ಲ. ಜೀವನದಲ್ಲಿ ಹಾಸ್ಯ ಹಾಸುಹೊಕ್ಕಾಗಿರಬೇಕು. ಆಗ ಮಾತ್ರ ಆರೋಗ್ಯಪೂರ್ಣ ಬದುಕು ಅನುಭವಿಸಲು ಸಾಧ್ಯ. ಹಾಸ್ಯದ ಪರಾಕಾಷ್ಠೆಗೆ ಅಮೇರಿಕಾದಲ್ಲೊಂದು ಕಥೆ ಇದೆ. ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ಮತ್ತು ಅವರ ಪತ್ನಿ ನಾಟಕಗೃಹವೊಂದರಲ್ಲಿ ನಾಟಕ ವೀಕ್ಷಿಸುತ್ತಿದ್ದರು. ಅದೇ ಹೊತ್ತಿಗೆ ಲಿಂಕನ್‌ರ ಕೊಲೆ ನಡೆಯಿತು. ಆ ನಂತರದ ದಿನಗಳಲ್ಲಿ ಮೂಡಿಬಂದ ಕಡು ಹಾಸ್ಯ ಇದು. ಒಬ್ಬಾತ ಲಿಂಕನ್ ಹೆಂಡತಿ ಹತ್ತಿರ ಕೇಳಿದನಂತೆ – ‘ಅದೆಲ್ಲ ಇರಲಿ, ಆ ದಿನ ನಾಟಕ ಹೇಗಿತ್ತು?’ ಎಂತ. ಅಮೇರಿಕಾದ ಜನ ಹಾಸ್ಯಪ್ರಿಯರು. ಈ ಹಾಸ್ಯವನ್ನೂ ಸಹಿಸಿಕೊಂಡರು. ಆದರೆ ಇದೇ ಹಾಸ್ಯ ನಮ್ಮ ದೇಶದಲ್ಲಿ ಆಳುವವರ ಬಗ್ಗೆ ಬರೆದರೆ, ಹೇಳಿದರೆ ನಡೆದೀತೇ? ಇತ್ತೀಚೆಗಿನ ಘಟನೆಗಳು ಗಾಬರಿ ಹುಟ್ಟಿಸುತ್ತವೆ. ತುರ್ತು ಪರಿಸ್ಥಿತಿಯ ನೆನಪು ತರುತ್ತವೆ.

ದೇವರನ್ನೂ ಲೆಕ್ಕಿಸಲಿಲ್ಲ…
ಹಾಸ್ಯ ಇಂದು ನಿನ್ನೆಯದಲ್ಲ. ತೆನಾಲಿ ರಾಮಕೃಷ್ಣನಿಗೆ ದೇವಿ ಪ್ರತ್ಯಕ್ಷಳಾಗಿ, ‘ಬೇಕಾದ ವರ ಕೇಳು’ ಎಂದಾಗ ರಾಮಕೃಷ್ಣ ಪಕಪಕ ನಕ್ಕುಬಿಟ್ಟನಂತೆ. ‘ಯಾಕೆ ನಗುತ್ತೀ?’ ಎಂದು ದೇವಿ ಕೇಳಿದರೆ, ‘ಅಲ್ಲ, ನಿನಗಿಷ್ಟು ಮುಗುಗಳಿವೆಯಲ್ಲ – ಅದಕ್ಕಾಗಿ ನಗುಬಂತು. ನಮಗಿರುವುದು ಒಂದೇ ಮೂಗು. ಶೀತವಾದರೆ ಆ ಒಂದು ಮೂಗಿನ ಸಿಂಬಳ ತೆಗೆಯುವುದೇ ಪ್ರಯಾಸದ ಸಂಗತಿ. ಹಾಗಿರುವಾಗ ಇಷ್ಟು ಮೂಗುಗಳಿಗೆ ಶೀತವಾದರೆ ನೀನು ಹೇಗೆ ಸುಧಾರಿಸುತ್ತಿಯಪ್ಪಾ ಎಂದು ನೆನೆದು ನನಗೆ ನಗು ಬಂತು’ ಎಂದನಂತೆ. ಹಾಸ್ಯ ಚಕ್ರವರ್ತಿಗಳಿಗೆ ಹಾಸ್ಯ ಮಾಡಲು ಯಾರದೇ ಭಯವಿರಲಿಲ್ಲ, ದೇವರದ್ದು ಸಹಾ.

ಬೀರಬಲ್ಲನಂತಹ ಹಾಸ್ಯಚಕ್ರವರ್ತಿ ಆ ಮಹಾನ್ ಅಕ್ಬರ್ ಮಹಾರಾಜನನ್ನೇ ನಿರ್ಭೀತಿಯಿಂದ ಹಾಸ್ಯ ಮಾಡಲಿಲ್ಲವೇ? ಒಂದು ದಿನ ಅಕ್ಬರ್ ಮಹಾರಾಜ ಕೆಳಕ್ಕೆ ಬಿದ್ದ ಒಂದು ನಾಣ್ಯವನ್ನು ಹೆಕ್ಕಲು ಬಾಗಿದ್ದನಂತೆ. ಆಗ ಅಲ್ಲಿಗೆ ಬಂದ ಬೀರಬಲ್ಲ ಅದನ್ನು ಕಂಡು, ಚಕ್ರವರ್ತಿಯ ಪೃಷ್ಠವನ್ನೇ ತಟ್ಟಿಬಿಟ್ಟನಂತೆ. ಅಕ್ಬರ್ ಮಹಾರಾಜನಿಗೆ ಕೋಪ ನೆತ್ತಿಗೇರಿತು. ’ನಾನೋ ಮಹಾನ್ ಮಹಾರಾಜ. ಈ ವಿದೂಷಕ ನನ್ನ ಪೃಷ್ಠ ತಟ್ಟುವುದೇ ! ಎಂತಹ ಧಾರ್ಷ್ಟ್ಯತನ! ಇವನ ಅಹಂಕಾರ ಇಳಿಸುತ್ತೇನೆ’ ಎಂದುಕೊಂಡು ’ಮಹಾರಾಜನ ಪೃಷ್ಠ ತಟ್ಟಿದ ಧಾರ್ಷ್ಟ್ಯತನಕ್ಕಾಗಿ ನಿನಗೆ ಮರಣದಂಡನೆ ವಿಧಿಸಿದ್ದೇನೆ’ ಎಂದರು ‘ಆದರೆ ಒಂದು ಮಾತು. ಹೀಗೆ ನೀನು ಮಾಡಿದ್ದಕ್ಕೆ ಇದಕ್ಕಿಂತ ಹೆಚ್ಚಿನ ಧಾರ್ಷ್ಟ್ಯತನದ ಸಮಜಾಯಿಸಿಕೆ ನೀಡಿದರೆ ನಿನ್ನನ್ನು ಕ್ಷಮಿಸುತ್ತೇನೆ’ ಎಂದನಂತೆ. ಆಗ ಬೀರಬಲ ವಿನೀತನಾಗಿ ಉತ್ತರಿಸಿದನಂತೆ. ’ಜಹಾಂಪನಾ, ಬಗ್ಗಿದ್ದು ನೀವೆಂತ ತಿಳಿದಿರಲಿಲ್ಲ, ಮಹಾರಾಣಿಯವರು ಎಂತ ಭಾವಿಸಿ ಪೃಷ್ಠ ತಟ್ಟಿದೆ’ ಎಂದು ತುಂಟತನದ ಸಮಜಾಯಿಸಿಕೆ ಕೊಟ್ಟನಂತೆ. ಮರಣ ಭಯದಲ್ಲೂ ದಾರ್ಷ್ಟ್ಯತನದ ಹಾಸ್ಯ ಮೆರೆದ ಬೀರಬಲ್ಲನ ಜಾಣ್ಮೆಗೆ ತಲೆದೂಗಿದ ಅಕ್ಬರ್ ಮಹಾರಾಜ ಹೊಟ್ಟೆತುಂಬ ನಕ್ಕು ಅವನನ್ನು ಕ್ಷಮಿಸಿಬಿಟ್ಟನಂತೆ. ಅಂದಿನ ಮಹಾರಾಜರುಗಳಿಗಿದ್ದಂತಹ ಹಾಸ್ಯಪ್ರಜ್ಞೆ ಇಂದಿನ ಆಳುವ ಜನಕ್ಕೆ ಬರುವುದುಂಟೇ?

ಕೈಲಾಸಂ ಹಾಸ್ಯ
ಸಾವಿನ ಸಂದರ್ಭದಲ್ಲೂ ಹಾಸ್ಯ ಮೆರೆದವರಲ್ಲಿ ಕರ್ನಾಟಕದ ’ಕನ್ನಡಕ್ಕೊಬ್ಬನೇ ಕೈಲಾಸಂ’ ಹೆಸರು ಮರೆಯುವಂತಿಲ್ಲ. ಕೈಲಾಸಂ ತಂದೆ ಜಸ್ಟೀಸ್ ಪರಮಶಿವ ಅಯ್ಯರ್ ರುಗ್ಣಶಯ್ಯೆಯಲ್ಲಿ ಮಲಗಿದ್ದರು. ಈಗಲೋ ಆಗಲೋ ಸಾಯುವ ಸ್ಥಿತಿ. ಆ ಮನೆಯಿಂದ ಹೊರಹಾಕಲ್ಪಟ್ಟಿದ್ದ ಕೈಲಾಸಂ ಆಗ ಅಪ್ಪನ ಕೊನೆಯ ದರ್ಶನಕ್ಕಾಗಿ ಮನೆಗೆ ಬಂದರಂತೆ. ಮಗನನ್ನು ಕಂಡು ಪರಮಶಿವ ಅಯ್ಯರ್‌ಗೆ ಮನಸ್ಸು ತುಂಬಿ ಬಂತು. ಕೈಲಾಸಂರ ಅಸಡ್ಡಾಳ ವರ್ತನೆಗಳನ್ನೆಲ್ಲಾ ಮರೆತು ಕೇಳಿದರಂತೆ, ’ರಾಜಾ, ನಿನಗೇನು ಬೇಕು?’ ಎಂದು. ಆಗ ಕೈಲಾಸಂ, ’ಅಪ್ಪಾ, ನನಗೇನೂ ಬೇಡ’ ಎಂದು ಉತ್ತರಿಸಿದರಂತೆ. ಆಶ್ಚರ್ಯಗೊಂಡ ಪರಮಶಿವ ಅಯ್ಯರ್, ’ಆರ್ ಯೂ ಸೀರಿಯಸ್?’ ಎಂದು ಕೇಳಿದರಂತೆ. ಆಗ ಕೈಲಾಸಂ ತನಗೆ ಸಹಜವಾದ ಹಾಸ್ಯಪ್ರಜ್ಞೆ ಮೆರೆಸುತ್ತಾ, ’ಫಾದರ್, ಐ ಆಮ್ ನಾಟ್ ಸೀರಿಯಸ್, ಯೂ ಆರ್ ಸೀರಿಯಸ್’ ಎಂದರಂತೆ. ತನ್ನ ಕೊನೆಯ ಗಳಿಗೆ ಸಮೀಪಿಸಿದಾಗಲೂ ಕೈಲಾಸಂ ಹಾಸ್ಯಪ್ರಜ್ಞೆ ಜಾಗೃತವಾಗಿಸಿಕೊಂಡು ಆಡಿದ ಮಾತಿಗೆ ಖುಷಿಯಾದ ಜಸ್ಟೀಸ್ ಪರಮಶಿವ ಅಯ್ಯರ್ ಮುಗುಳ್ನಕ್ಕು ಆ ಕಡೆ ಹೊರಳಿದವರು, ಮತ್ತೆ ಈ ಕಡೆ ಹೊರಳಲಿಲ್ಲ! ಸಮಾಜದ ಎಲ್ಲ ಸ್ತರಗಳ ಜನಗಳ ಮೇಲೂ ಹಾಸ್ಯದ ಚಾಟಿಯೇಟು ಬಾರಿಸಿದ ಕೈಲಾಸಂ ಈಗ ಬದುಕಿದ್ದರೆ ಅವರ ಹಾಸ್ಯವನ್ನು ಈ ಸರಕಾರಗಳು ಸಹಿಸುತ್ತಿದ್ದುವೇ? (ಕುಂದಾಪ್ರ ಡಾಟ್ ಕಾಂ ಅಂಕಣ)

Click here

Click here

Click here

Click Here

Call us

Call us

ಇತ್ತೀಚೆಗಿನ ಒಂದು ಕಥೆ
ದಕ್ಷಿಣಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಸರ್ವಜ್ಞ ಮಹಾಕವಿಯ ಚತುರ್ಥ ಶತಮಾನೋತ್ಸವ ನಡೆಯುತ್ತಿತ್ತು. ಅದಕ್ಕೆ ಮುಖ್ಯ ಅತಿಥಿಯಾಗಿ ಬಂದವರು ಆಗ ಕರ್ನಾಟಕದ ಸಚಿವೆಯಾಗಿದ್ದ ನಗುಮೊಗದ ಶ್ರೀಮತಿ ಮನೋರಮಾ ಮಧ್ವರಾಜರು. ತಮ್ಮ ಎಂದಿನ ನೇರ, ಪ್ರಾಮಾಣಿಕ ಹಾಗೂ ಮುಗ್ಧ ಶೈಲಿಯಲ್ಲಿ ಮಾತಾಡುತ್ತಾ ಮನೋರಮಾ ಹೇಳಿದ್ದು ಇಂದಿಗೂ ನನಗೆ ನೆನಪಿನಲ್ಲಿದೆ. ’ಅಲ್ಲ – ಸರ್ವಜ್ಞ ಕವಿಯ ಚತುರ್ಥ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ನನ್ನನ್ನು ಕರೆದಿದ್ದೀರಲ್ಲ – ನನಗೇನು ಸಾಹಿತ್ಯದ ಸಂಗತಿ ಗೊತ್ತುಂಟೆಂತ ಮಾಡಿದ್ದೀರಿ? ಮಂತ್ರಿಗಳೆಲ್ಲ ಸರ್ವಜ್ಞರೆಂತ ತಿಳಿದುಕೊಂಡಿದ್ದೀರಾ?’ ಎಂದು ಸಂಘಟಕರನ್ನು ಛೇಡಿಸಿದ ಮನೋರಮಾ ನಂತರ ಸರ್ವಜ್ಞನ ಬಗ್ಗೆ ಮಾತನಾಡಿದ್ದು ಮಾತ್ರ ಕ್ರಾಂತಿಕಾರಿಯಾಗಿತ್ತು. ’ನಾನು ಸಣ್ಣವಳಿರುವಾಗ ಶಾಲೆಯಲ್ಲಿ ಸರ್ವಜ್ಞನ ವಚನಗಳನ್ನು ಓದಿದ ನೆನಪಿದೆ ಅಷ್ಟೆ. ಸರ್ವಜ್ಞನ ಬಗ್ಗೆ ಗಂಭೀರವಾಗಿ ಮಾತಾಡಲು ನನಗೆ ಗೊತ್ತಿಲ್ಲ. ಆದರೆ ಒಂದು ಸಂಗತಿ ಮಾತ್ರ ಹೇಳುತ್ತೇನೆ, ಇವತ್ತು ಆ ಸರ್ವಜ್ಞ ಬದುಕಿದ್ದರೆ ಮತ್ತು ಇವತ್ತು ಆತ ಅವನ್ನೆಲ್ಲಾ ಬರೆದಿದ್ದರೆ ನಮ್ಮ ಸರಕಾರ ಅವನನ್ನು ಖಂಡಿತ ಜೈಲಿಗೆ ಹಾಕುತ್ತಿತ್ತು’ ಎಂದು ಪ್ರಚಂಡ ಕರತಾಡನದ ನಡುವೆ ಘೋಷಿಸಿಬಿಟ್ಟರು. ಆಗ ತುರ್ತು ಪರಿಸ್ಥಿತಿ ಇತ್ತೋ, ಮುಕ್ತಾಯವಾದ ಸಮಯವೋ ಸರಿಯಾಗಿ ನೆನಪಾಗದು. ಆದರೆ ಈ ಉದ್ಗಾರ ಸರಕಾರದ ಓರ್ವ ಮಂತ್ರಿಣಿಯ ಬಾಯಿಯಿಂದ ಬಂದದ್ದು ಆಗಿನ ಉಸಿರುಕಟ್ಟಿಸುವ ವಾತಾವರಣದಲ್ಲಿದ್ದ ಜನಕ್ಕೆ ಎಷ್ಟು ಆಪ್ಯಾಯಮಾನವಾಗಿತ್ತೆಂದರೆ ಜನ ಪ್ರಚಂಡ ಘೋಷದಿಂದ ಅವರ ಮಾತನ್ನು ಸ್ವಾಗತಿಸಿದ್ದರು. ಆಳುವ ಜನಗಳು ಟೀಕೆಯನ್ನು ಸಹಿಸದ ಮಂದಿ ಎಂದು ಅಂದೇ ಮನೋರಮಾ ಬಹಿರಂಗಪಡಿಸಿದ್ದರು. ಆದರೆ, ಹೇಳುವುದಕ್ಕೇನೋ ಹೇಳಿಯಾಗಿತ್ತು. ಅದನ್ನೇ ಪತ್ರಕರ್ತರು ನಾಳೆ ಬರೆದುಬಿಟ್ಟರೆ ತನ್ನ ಗತಿ ಏನು? ಎಂಬ ಆತಂಕ ಅವರಲ್ಲಿ ಮೂಡಿರಬೇಕು. ತಕ್ಷಣ ಅವರು ಪತ್ರಕರ್ತರತ್ತ ಮುಖ ತಿರುಗಿಸಿ ಕೈ ಮುಗಿದು, ’ದಯವಿಟ್ಟು ಇದನ್ನು ಮಾತ್ರ ಪತ್ರಿಕೆಯಲ್ಲಿ ಪ್ರಕಟಿಸಬೇಡಿ. ನೀವು ನಾನು ಹೇಳಿದ್ದನ್ನೆಲ್ಲ ಪೇಪರಿನಲ್ಲಿ ಹಾಕಿದರೆ ಸರ್ವಜ್ಞನ ಬದಲಿಗೆ ನಾನು ಜೈಲಿಗೆ ಹೋಗಬೇಕಾದೀತು’ ಎಂದು ಇನ್ನೊಮ್ಮೆ ಹರ್ಷೋದ್ಗಾರಗಳ ನಡುವೆ ನುಡಿದುಬಿಟ್ಟರು. ಪತ್ರಕರ್ತರುಗಳೂ ಅವರ ಸೌಜನ್ಯಕ್ಕೆ ತಲೆಬಾಗಿ ಈ ಸಂಗತಿಯನ್ನು ವರದಿಮಾಡಲಿಲ್ಲ. ಓರ್ವ ಮಂತ್ರಿಗೇ ತನ್ನ ಹಾಸ್ಯದ ಅಥವಾ ಟೀಕೆಯ ಬಗ್ಗೆ ಇಷ್ಟು ಸರಕಾರದ ಹೆದರಿಕೆ ಇದ್ದಿತ್ತೆಂದಾದರೆ ಸಾಮಾನ್ಯ ಜನರ ಪಾಡೇನು ? ಸಾಮಾಜ್ಯ ಪತ್ರಕರ್ತ, ವ್ಯಂಗ್ಯಚಿತ್ರಕಾರರ ಪಾಡೇನು? ಆಗಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು ಅಂದಿನ ಆ ಘಟನೆ.  (ಕುಂದಾಪ್ರ ಡಾಟ್ ಕಾಂ ಅಂಕಣ)

‘ಛೂ ಬಾಣ’ದಲ್ಲಿ
ಇದು ಹೇಗೋ ‘ಪ್ರಜಾವಾಣಿ’ಯ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾಯರ ಕಿವಿಗೆ ಬಿದ್ದುಬಿಟ್ಟಿತು. ಅವರು ಆಗ ‘ಪ್ರಜಾವಾಣಿ’ಯಲ್ಲಿ ‘ಛೂ ಬಾಣ’ ಎಂಬ ಜನಪ್ರಿಯ ಅಂಕಣ ಬರೆಯುತ್ತಿದ್ದರು. ಮರುದಿನವೇ ಆ ಅಂಕಣದಲ್ಲಿ ಮಂತ್ರಿಗಳ ಈ ಮಾತಿನ ಪ್ರಸ್ತಾಪ ಆಗಿಯೇಬಿಟ್ಟಿತು. ‘ಕರ್ನಾಟಕದ ಸಚಿವರೊಬ್ಬರು ಸರ್ವಜ್ಞ ಕವಿಯ ಚತುರ್ಥ ಶತಮಾನೋತ್ಸವದಲ್ಲಿ ಮಾತನಾಡುತ್ತಾ, ನನ್ನನ್ಯಾಕೆ ಕರೆದದ್ದು, ನಾನೇನು ಸರ್ವಜ್ಞನೇ? ಎಂದು ಕೇಳಿದರಂತೆ. ಮಂತ್ರಿಗಳೆಲ್ಲಾ ತಾವೇ ಸರ್ವಜ್ಞರೆಂದು ಬೀಗಿಕೊಂಡು ಯಾವುದೇ ವಿಷಯದ ಬಗ್ಗೂ ಭಾಷಣ ಬಿಗಿಯುವ ಪ್ರವೃತ್ತಿ ಹೊಂದಿದ್ದ ಸಂದರ್ಭದಲ್ಲಿ ಒಬ್ಬ ಮಂತ್ರಿಯಾದರೂ ತಾವು ಸರ್ವಜ್ಞರಲ್ಲ ಎಂದು ಒಪ್ಪಿಕೊಂಡದ್ದು ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ’ ಎಂದು ಮೆಚ್ಚಿ ಬರೆದರುPoliticians cartoons, ಇತರ ಮಂತ್ರಿಗಳನ್ನು ತಮ್ಮ ವ್ಯಂಗ್ಯ ಬಾಣದಿಂದ ಚುಚ್ಚುತ್ತಾ.

ಇಂದಿನ ಸ್ಥಿತಿ
ಈ ಸಂಗತಿಗಳು ಯಾಕೆ ನೆನಪಾಗುತ್ತವೆ ಎಂದರೆ ಇಂದು ಭಾರತದ ಪರಿಸ್ಥಿತಿ ಅಷ್ಟು ಕೆಟ್ಟಿದೆ. ಆಳುವ ಜನಕ್ಕೆ ಅಹಂಕಾರ ಅಮರಿಕೊಂಡಿದೆ. ತಾವು ಜನಸೇವಕರಲ್ಲ – ತಾವೇ ಚಕ್ರವರ್ತಿಗಳು ಎಂಬ ಅಹಂಭಾವ ಬಂದಿದೆ. ಟೀಕೆಯನ್ನು ಸಹಿಸುವಷ್ಟು ಹೃದಯವೈಶಾಲ್ಯ ಕಳೆದುಕೊಂಡಿದ್ದಾರೆ. ಹಾಸ್ಯಪ್ರಜ್ಞೆ ಎಂದೋ ಮಾಯವಾಗಿದೆ. ಸತ್ಯಕ್ಕೆಂದರೆ ಆಳುವ ಜನರಲ್ಲಿ ಹಾಸ್ಯಪ್ರಜ್ಞೆ ಸತ್ತೇ ಹೋಗಿದೆ ಎಂಬಷ್ಟಾಗಿದೆ.

ನೆಹರೂ ಆದರ್ಶ
ಪಂಡಿತ್ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಹಾಸ್ಯಕ್ಕಾಗಿಯೇ ಮೀಸಲಾಗಿದ್ದ ’ಶಂಕರ್ಸ್ ವೀಕ್ಲಿ’ ಆರಂಭಗೊಂಡಿತ್ತು. ಸಂಪಾದಕ ಶಂಕರನ್‌ಗೆ ಪ್ರಧಾನಿ ನೆಹರು ಆಗಲೇ ಹೇಳಿದ್ದರಂತೆ, ’ನನ್ನನ್ನೂ ಬಿಡಬೇಡಿ’ ಎಂತ. ಆತ ಪಂಡಿತ್‌ಜೀಯನ್ನು ಬಿಟ್ಟದ್ದೇ ಇಲ್ಲ. ಪ್ರತೀ ಸಂಚಿಕೆಯಲ್ಲೂ ನೆಹರು ಆತನ ಟೀಕೆಯ, ಹಾಸ್ಯದ ವಸ್ತುವಾಗಿ ನಗೆಹೊನಲು ಹರಿಸುತ್ತಿದ್ದ. ಪ್ರಧಾನಿಯಾಗಿದ್ದ ನೆಹರೂ ಸಹಾ ಒಂದೇ ಒಂದು ದಿನ ಈ ಟೀಕೆ ಮತ್ತು ಹಾಸ್ಯಗಳ ಬಗ್ಗೆ ಹಾಗೂ ತನ್ನ ವ್ಯಂಗ್ಯಚಿತ್ರಗಳ ಬಗ್ಗೆ ಮುನಿಸು ಮಾಡಿಕೊಂಡದ್ದೇ ಇರಲಿಲ್ಲ. ಎಂತಹ ಅಪಥ್ಯ ಟೀಕೆಗಳನ್ನೂ, ಕಡುಹಾಸ್ಯವನ್ನೂ ನಗುಮೊಗದಿಂದ ಸ್ವೀಕರಿಸಿ ಆನಂದಿಸುತ್ತಿದ್ದರು ನೆಹರು. ಆ ನಂತರ ಹಾಗಾದರೆ ನಮ್ಮ ನಾಯಕರುಗಳಿಗೆ ಏನಾಯಿತು? ಅಂದಿನ ಹಾಸ್ಯಪ್ರಜ್ಞೆಯಾಗಲೀ, ಹೃದಯ ವೈಶಾಲ್ಯವಾಗಲೀ ಎಲ್ಲಿ ಹೋಯಿತು?

ಪತ್ರಿಕೆಯೊಂದಿಗೆ ಸತ್ತ ಹಾಸ್ಯಪ್ರಜ್ಞೆ
ಭಾರತದಲ್ಲಿ ತುರ್ತು ಪರಿಸ್ಥಿತಿ ಬಂದಿತ್ತು. ’ಶಂಕರ್ಸ್ ವೀಕ್ಲಿ’ಯ ಮೇಲೆ ನಿಯಂತ್ರಣ ಬಂತು. ಶಂಕರನ್ ಅದನ್ನು ಸಹಿಸಲೇ ಇಲ್ಲ. 1975ರ ಆಗಸ್ಟ್ 31ರಂದು ತನ್ನ ಪತ್ರಿಕೆಯನ್ನೇ ಬಂದ್ ಮಾಡಿಬಿಟ್ಟರು. ಇಡೀ ಭಾರತದಲ್ಲಿ ಹಾಸ್ಯಪ್ರಜ್ಞೆಯನ್ನು ಬೆಳೆಸಿದ್ದ, ಮೆರೆಸುತ್ತಿದ್ದ ಒಂದು ಒಳ್ಳೆಯ ನಗೆಪತ್ರಿಕೆಯೇ ಆಳುವವರ ಕೆಂಗಣ್ಣಿನಿಂದಾಗಿ ಕೊನೆಯುಸಿರೆಳೆಯಿತು. ಪತ್ರಿಕಾರಂಗದಲ್ಲಿ ಅದೊಂದು ದೊಡ್ಡ ದುರಂತ. ನಗು ಎನ್ನುವುದು ಆಳುವ ರಂಗದಲ್ಲಿ ಸತ್ತೇ ಹೋಯಿತು. ತನ್ನ ಕೊನೆಯ ಸಂಪಾದಕೀಯದಲ್ಲಿ ಶಂಕರ್ ಬರೆದರು ’ನಿರಂಕುಶ ಅಧಿಕಾರದಲ್ಲಿ ಹಾಸ್ಯ, ನಗೆ ಇರುವುದಿಲ್ಲ. ಅವರು ಅದನ್ನೆಲ್ಲಾ ಸಹಿಸುವುದಿಲ್ಲ. (ಅಡಾಲ್ಫ್) ಹಿಟ್ಲರ್ ನಿರಂಕುಶಾಧಿಕಾರದಡಿ ಒಂದೇ ಒಂದು ಹಾಸ್ಯದ ನಾಟಕ, ವ್ಯಂಗ್ಯಚಿತ್ರ, ಸಾಹಿತ್ಯಿಕ ಕೃತಿ, ಕಾರ್ಯಕ್ರಮ ಇರಲಿಲ್ಲ’ ಎಂದು ವಿಷಾದದಿಂದ ಬರೆದು ಕೈ ಚೆಲ್ಲಿದರು. ಒಂದು ಅಪರೂಪದ ಹಾಸ್ಯಪತ್ರಿಕೆಯನ್ನು ಕೈಯಾರೆ ಕೊಂದು ಹಾಕಿದ ಅಪಕೀರ್ತಿ ವಿಷಮ ಪರಿಸ್ಥಿತಿಗೆ ಅರ್ಥಾತ್ ಅದನ್ನು ಘೋಷಿಸಿದ ಇಂದಿರಾ ಗಾಂಧಿಗೆ ಸಂದಿತು. (ಕುಂದಾಪ್ರ ಡಾಟ್ ಕಾಂ ಅಂಕಣ)

ತುರ್ತುಪರಿಸ್ಥಿತಿಗಿಂತಲೂ ಕೆಟ್ಟ ಕಾಲ
ಈಗ ಮತ್ತೆ ಅದನ್ನೇ ನೆನಪು ಮಾಡಿಕೊಂಡಿದ್ದಾರೆ ರಾಷ್ಟ್ರೀಯ ಧುರೀಣ ಎಲ್.ಕೆ.ಆಡ್ವಾಣಿ. ತುರ್ತು ಪರಿಸ್ಥಿತಿ ಕಾಲದಲ್ಲಾದರೂ ಹಾಸ್ಯಕ್ಕೆ, ವ್ಯಂಗ್ಯಚಿತ್ರಕ್ಕೆ ಈಗಿನಷ್ಟು ಗಂಡಾಂತರ ಇರಲಿಲ್ಲ ಎಂದ ಅವರು ಅಬು ಅಬ್ರಾಹಾಂ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್‌ರನ್ನು ವ್ಯಂಗ್ಯವಾಗಿ ಆಗಲೇ ಚಿತ್ರಸಿದ್ದ. ಬಾತ್‌ರೂಮಿನಲ್ಲಿ ಬಾತ್‌ಟಬ್‌ನಿಂದಲೇ ಇಂದಿರಾರ ಸುಗ್ರೀವಾಜ್ಞೆಗಳಿಗೆ ಸಹಿ ಹಾಕಿದ ಫಕ್ರುದ್ದೀನ್ ಆ ಚಿತ್ರದಲ್ಲಿ ಹೀಗೆ ಹೇಳುತ್ತಾರೆ, ‘ಇನ್ನೂ ಅಷ್ಟು ಸುಗ್ರೀವಾಜ್ಞೆಗಳಿದ್ದರೆ (ಸಹಿ ಮಾಡಲು) ಸ್ವಲ್ಪ ಕಾಯಲಿ’ ಎಂದು. ಅಂದರೆ ನಮ್ಮ ರಾಷ್ಟ್ರಪತಿ ಹೇಗೆ ಇಂದಿರಾರ ರಬ್ಬರ್ ಸ್ಟ್ಯಾಂಪ್ ಆಗಿದ್ದರು ಎಂಬುದನ್ನು ಅಬು ಅಬ್ರಾಹಂ ಚಿತ್ರಿಸಿದ್ದರು. ಆಗ ತುರ್ತು ಪರಿಸ್ಥಿತಿ ಇದ್ದರೂ ಅಬು ಅಬ್ರಹಾಂರನ್ನು ಆಗಿನ ಸರಕಾರ ಬಂಧಿಸಲಿಲ್ಲ. ಆದರೆ ಈಗೇನಾಗುತ್ತಿದೆ?

ದೇಶದಲ್ಲಿ ಒಂದರ ಮೇಲೊಂದು ಕರಾಳ ಘಟನೆಗಳು
ಅಸೀಮ್ ತ್ರಿವೇದಿ ಎಂಬ ವ್ಯಂಗ್ಯಚಿತ್ರಕಾರನನ್ನು ಅವನ ವ್ಯಂಗ್ಯ ಚಿತ್ರಗಳಿಗಾಗಿ ಮಹಾರಾಷ್ಟ್ರ ಪೋಲೀಸರು ನಡುರಾತ್ರಿ ಹೋಗಿ ಬಂಧಿಸಿ ಅವನ ಮೇಲೆ ‘ರಾಜದ್ರೋಹ’ದ ಆರೋಪ ಬಡಿದದ್ದು ಈಗಿನ ಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ ಕರಾಳ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ ಆಡ್ವಾಣಿ. ನೆಹರೂ ಕಾಲದಲ್ಲಿಯೇ ಪ್ರಕಟವಾಗಿದ್ದ ಬಾಬಾ ಅಂಬೇಡ್ಕರ್ ಕುರಿತಾಗಿದ್ದ ಹಿಂದೀ ವಿರೋಧಿ ವ್ಯಂಗ್ಯಚಿತ್ರವೂ ನಮ್ಮ ಪಠ್ಯದಲ್ಲಿ ಸೇರಿದ್ದಕ್ಕೆ ಸಂಸತ್‌ನಲ್ಲೇ ಭಾರೀ ಆಕ್ರೋಶ ಎದ್ದಿತು. ಆಗ ಇಲ್ಲದಿದ್ದ ಬೊಬ್ಬೆ ದಶಕಗಳ ನಂತರ ಈಗ ಎದ್ದು, ಬೆದರಿ ಹೋದ ಕೇಂದ್ರ ಸರಕಾರ ಅದನ್ನು ಪಠ್ಯದಿಂದ ವಾಪಾಸು ಪಡೆಯುವುದಾಗಿ ಹೇಳಿಬಿಟ್ಟಿತು. ಥೊರಾಟ್ ಸಮಿತಿ ಎನ್‌ಸಿಈಆರ್‌ಟಿಯ ರಾಜಕೀಯ ಶಾಸ್ತ್ರದ ಪಠ್ಯಗಳಿಂದ ಸುಮಾರು 40 ವ್ಯಂಗ್ಯಚಿತ್ರಗಳನ್ನು ಕಿತ್ತುಹಾಕಲು ಶಿಫಾರಸ್ಸು ಮಾಡಿತು. ಪಶ್ಚಿಮಬಂಗಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹಾಸ್ಯ ಮಾಡಿದ ಒಂದು ವ್ಯಂಗ್ಯಚಿತ್ರವನ್ನು ಈ-ಮೈಲ್‌ನಲ್ಲಿ ಫಾರ್‌ವರ್ಡ್ ಮಾಡಿದ್ದಕ್ಕಾಗಿ ಜಾಧವಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ.ಅಂಬಿಕೇಶ ಮಹಾಪಾತ್ರ ಎಂಬವರನ್ನು ಪೋಲೀಸರು ಬಂಧಿಸಿ ರಾತ್ರಿ ಇಡೀ ಸೆರೆಯಲ್ಲಿಟ್ಟರು. ಈ-ಮೈಲು ಎರವಲು ನೀಡಿದ ಅವರ ನೆರೆಮನೆಯ ಸುಬ್ರತಾಸೇನ್ ಗುಪ್ತಾ ಎಂಬವರನ್ನು ಸಹಾ ಬಂಧಿಸಿ ಅವರೊಂದಿಗಿಟ್ಟರು. ಸಾರ್ವಜನಿಕ ಸಮಾರಂಭದಲ್ಲಿ, ’ರೈತರ ಸ್ಥಿತಿಗತಿ ನೋಡಿದ್ದೀರಾ?’ ಎಂದು ಮಮತಾ ದೀದಿಗೆ ಪ್ರಶ್ನೆ ಕೇಳಿದ್ದಕ್ಕಾಗಿ ಶಿಲಾದಿತ್ಯ ಚೌಧುರಿ ಎಂಬ ರೈತನನ್ನೇ ಆಗಸ್ಟ್ 11ರಂದು ದೀದಿ ಆದೇಶದ ಪ್ರಕಾರ ಪಶ್ಚಿಮಬಂಗಾಲ ಪೋಲೀಸರು ಬಂಧಿಸಿಬಿಟ್ಟರು ! ಇವೆಲ್ಲಾ ತುರ್ತು ಪರಿಸ್ಥಿತಿಯ ನೆನಪನ್ನು ತಾರದೇ ಇರುತ್ತದೆಯೇ? (ಕುಂದಾಪ್ರ ಡಾಟ್ ಕಾಂ ಅಂಕಣ)

ರಾಜದ್ರೋಹವೇ ?
ಅಸಿಂ ತ್ರಿವೇದಿಯ ವ್ಯಂಗ್ಯಚಿತ್ರಗಳಲ್ಲಿ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳ ಬದಲು ತೋಳಗಳನ್ನು ತೋರಿಸಿ, ’ಸತ್ಯಮೇವ ಜಯತೇ’ ಎಂದು ಇದ್ದಲ್ಲಿ ’ಭ್ರಷ್ಟಮೇವ ಜಯತೇ’ ಎಂದು ಬರೆದದ್ದು, ಸಂಸತ್ತನ್ನು ಪಾಯಿಖಾನೆಯಂತೆ ಚಿತ್ರಿಸಿದ್ದು ಅಣ್ಣಾ ಹಜಾರೆ ಆಂದೋಲನದಲ್ಲಿ ಪಾಲ್ಗೊಂಡ ಖ್ಯಾತಿಯ ಅಸಿಂ ತ್ರಿವೇದಿ ಮೇಲೆ ರಾಜದ್ರೋಹದ ಆರೋಪ ಹೊರಿಸುವಂತೆ ಮಾಡಿತು. ಅಳಿದುಹೋದ ಬ್ರಿಟಿಷರ ಆಡಳಿತೆಯ ಕಾಲದ, ಅವರು ತಮ್ಮ ರಕ್ಷಣೆಗಾಗಿ ಮಾಡಿಕೊಂಡಿದ್ದ ಕಾನೂನನ್ನು ಈಗ ಸ್ವತಂತ್ರ ಭಾರತದ ಆಳುವ ಮಂದಿ ತಮ್ಮ ರಕ್ಷಣೆಗಾಗಿ ಪ್ರಜಾಪ್ರಭುತ್ವದಲ್ಲಿನ ಪ್ರಭುಗಳಾದ ಪ್ರಜೆಗಳ ಮೇಲೇ ಪ್ರಯೋಗಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ ಎಂದು ದೇಶವಿಡೀ ಆಕ್ರೋಶ ಉಂಟಾಗಿದೆ. ಅಂದ ಮೇಲೆ ಆಳುವ ಜನಗಳಲ್ಲಿ ಟೀಕೆಗಳನ್ನು ಸಹಿಸುವ ಶಕ್ತಿ, ಹೃದಯ ವೈಶಾಲ್ಯ ಹಾಗೂ ಹಾಸ್ಯವನ್ನು ಅರ್ಥವಿಸಿಕೊಂಡು ನಗುವ ಸೌಜನ್ಯ ಸತ್ತೇ ಹೋಯಿತೇ ಎಂದು ಕೇಳುವಂತಾಗಿದೆ.

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

One thought on “ಆಳುವ ಜನರಲ್ಲಿ ಹಾಸ್ಯಪ್ರಜ್ಞೆ ಸತ್ತು ಹೋಯಿತೇ ?

  1. Excellent and relevant article (as expected from him always). I was just thinking, how much we could have laughed if Mr Hebbar tells the same in a speech (I was imagining myself hearing his speech and cherished the article).
    On a lighter note : “Note” at the end of the article that says reproducing with out consent is illegal. Such persons will be prosecuted… May be you could have added to this specific article, as writer himself is a lawyer, which readers has to be aware of before thinking of reproducing 🙂

Leave a Reply