ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 2 ದಿನಗಳ ಯೋಗ ಶಿಬಿರವು ಇತ್ತೀಚಿಗೆ ನಡೆಯಿತು.
ಇಶಾ ಫೌಂಡೇಶನ್ ಸದ್ಗುರು ಗುರುಕುಲಂನ ಶಾಸ್ತ್ರೀಯ ಹಟ ಯೋಗದ ಶಿಕ್ಷಕರಾದ ಪ್ರವೀಣ್ ಕುಮಾರ್ ಯೋಗ ನಮಸ್ಕಾರ, ನಾದಯೋಗ, ವೃತ್ತಾಕಾರ ಕೈ ಚಲನೆ, ಸ್ಕ್ವಾಟಿಂಗ್, ಓಂಕಾರ ಪಠಣ ಇತ್ಯಾದಿಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ, ಅವರು ನಿತ್ಯದ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸುಗಳು ಪ್ರಶಾಂತಗೊಳ್ಳುತ್ತವೆ. ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ಬದಲು ಸರಳ ಆಸನಗಳನ್ನು ಅಭ್ಯಸಿಸುವ ಮೂಲಕ ಆರೋಗ್ಯಪೂರ್ಣ ಜೀವನವನ್ನು ಹೊಂದಬಹುದು. ಮೂಳೆ, ಕೀಲು, ಗಂಟು, ಬಾಹುಗಳಲ್ಲಿನ ನೋವುಗಳು ಯೋಗಭ್ಯಾಸದಿಂದಾಗಿ ನಿವಾರಣೆಗೊಳ್ಳುತ್ತವೆ. ದೇಹದ ರಕ್ತಸಂಚಾರ ಸುಗಮಗೊಂಡು ದೇಹವು ಚೈತನ್ಯವನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಯೋಗಾಭ್ಯಾಸವನ್ನು ನಮ್ಮ ನಿತ್ಯಜೀವನದ ಮಂತ್ರವನ್ನಾಗಿಸಿಕೊಳ್ಳಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆರೋಗ್ಯವನ್ನು ಹೊಂದುವ ಮಾರ್ಗವನ್ನು ತೋರಿಸಿಕೊಡಲು ಪ್ರಯತ್ನಿಸುತ್ತದೆ. ಪ್ರತಿನಿತ್ಯ ಯೋಗಶಿಕ್ಷಕರ ಮೂಲಕ ನಿಗದಿತ ವೇಳಾಪಟ್ಟಿಯಂತೆ ನಿರ್ದಿಷ್ಟ ತರಗತಿಗಳಿಗೆ ಯೋಗದ ಪಾಠವನ್ನು ನೀಡಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ನುರಿತ ತರಬೇತುದಾರರ ಮೂಲಕ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿಯನ್ನೂ ಸಹ ನೀಡಲಾಗುತ್ತಿದೆ. ಯೋಗವನ್ನು ನಮ್ಮ ಬದುಕಿನ ಅಂಗವನ್ನಾಗಿಸಲು ಸರ್ವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಕೃಷ್ಣ ಹುಲಾಳ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.