ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯದ ಹತ್ತನೇ ವರ್ಷದ ಸಂಭ್ರಮದ ಪ್ರಯುಕ್ತ ಕೋಟೇಶ್ವರದ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ನಲ್ಲಿ ದಶಾರ್ಪಣಂ ಎಂಬ ವಿನೂತನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ನೀರಿನಲ್ಲಿ ಹಣತೆಯನ್ನು ತೇಲಿಸಿ ಕಾರ್ಯಕ್ರಮದ ಉಧ್ಘಾಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ ನಮ್ಮ ಪೂರ್ವಜರು ಕಲೆಯನ್ನು ನಮ್ಮ ಸಂಪ್ರದಾಯ ಹಾಗೂ ಶಿಕ್ಷಣದೊಂದಿಗೆ ಸೇರಿಸಿ ಶಾಸ್ತ್ರೀಯ ಮತ್ತು ಜಾನಪದ ಚೌಕಟ್ಟನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ. ಪ್ರದೇಶಗಳಿಗನುಗುಣವಾಗಿ, ಜನ ಸಮುದಾಯಗಳಿಗನುಗುಣವಾಗಿ ನಮ್ಮಲ್ಲಿ ಹಲವು ಸಂಸ್ಕೃತಿ ಹಾಗೂ ಕಲೆಗೆ ಬಹಳಷ್ಟು ಒತ್ತು ನೀಡಲಾಗುತ್ತಿದೆ. ನಮ್ಮೆಲ್ಲಾ ಶಿಕ್ಷಣಗಳ ಹಂತದಲ್ಲಿ ನಮ್ಮ ಕಲೆಯನ್ನು ಮುಂದೆಯೂ ಜೋಡಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ನಮ್ಮ ಬದುಕಿನ ಕಾಲಘಟ್ಟದಲ್ಲಿ ಭರತನಾಟ್ಯಕ್ಕೆ ನೂರು ವರ್ಷಗಳ ಇತಿಹಾಸದಲ್ಲಿ ಆರಂಭದಿಂದ ಇವತ್ತಿನ ವರೆಗೆ ಹಂತ ಹಂತವಾಗಿ ಬೆಳೆಯುತ್ತಾ ಹೋಗಿದೆ ಎನ್ನುವುದನ್ನು ಗಮನಿಸಿದ್ದೇವೆ. ಅಂದು ಕಲೆ ಹೇಗಿತ್ತು, ಇಂದು ಹೇಗಿದೆ ಎನ್ನುವುದನ್ನು ನಾವು ಅವಲೋಕಿಸಿದರೆ ಕಲೆಗೆ ಬಹಳಷ್ಟು ಗೌರವ ದೊರಕುತ್ತಿದೆ ಎನ್ನುವುದು ಗಮನಾರ್ಹ. ಹಿಂದೆ ಪುರುಷರು ಕಡಿಮೆಯಿದ್ದ ಭರತನಾಟುದಲ್ಲಿ ಈಗ ಬಹಳಷ್ಟು ಸಾಧನೆ ಮಾಡಿರುವುದು ಶಾಸ್ತ್ರೀಯ ಕಲೆಗಳಿಗೆ ನಮ್ಮ ಅವಿಭಜಿತ ಜಿಲ್ಲೆಯಲ್ಲಿ ಇದ್ದಾರೆ ಎನ್ನುವುದು ಸಂತೋಷದ ವಿಚಾರ ಎಂದರು.
ಇದನ್ನು ಮುಂದುವರೆಸಿಕೊಂಡು ಹೋಗಬೇಕಾದರೆ ಪೋಷಕರ ಹಾಗೂ ವಿದ್ಯಾ ಸಂಸ್ಥೆಗಳ ಬೆಂಬಲ ಅಗತ್ಯವಾಗಿದೆ. ಕಲೆಯ ಜೊತೆಯಲ್ಲಿ ಬದ್ಧತೆಯೊಂದಿಗೆ ಸೌಂದರ್ಯ ಪ್ರಜ್ಞೆಯುಳ್ಳ ಪ್ರೇಕ್ಷಕ ಇದ್ದಾಗ ಕಲೆಯ ಉಳಿವು ಸಾಧ್ಯ. ಬದಲಾವಣೆಯೇ ಶಾಶ್ವತ ಎನ್ನುವದನ್ನು ಅರಿತು ಜಾಗರೂಕತೆಯಿಂದ ಕಲೆಗೆ ಹೊಸ ರೂಪ ನೀಡಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ. ಈ ಎಲ್ಲಾ ಕಲಾ ಪ್ರಾಕಾರವನ್ನು ಅಧ್ಯಯನ ಮಾಡಿ ಸೃಜನಶೀಲತೆಯ ಮೂಲಕ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ ಎಂದರು. ಇಂದು ಪ್ರೇಕ್ಷಕರು ತಮ್ಮ ಮನಸ್ಸಿನ ಮೇಲಾದ ದಾಳಿಯಿಂದಾಗಿ ಭ್ರಷ್ಟರಾಗುತ್ತಿದ್ದಾರೆ. ಇದನ್ನು ಸರಿಪಡಿಸುವ ಕೆಲಸವಾಗಬೇಕು. ನಮ್ಮ ಅವಿಭಜಿತ ಜಿಲ್ಲೆಯಲ್ಲಿ ಶಾಸ್ತ್ರೀಯ ಹಾಗೂ ಜಾನಪದ ಕಲೆಗಳ ಬಗ್ಗೆ ಆಗುತ್ತಿರುವ ಕೆಲಸ ಕುಂದಾಪುರದಲ್ಲಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ಇನ್ನಷ್ಟು ಕೆಲಸವಾಗಬೇಕಾಗಿದೆ ಎಂದವರು ಹೇಳಿದರು.
ನಾಟ್ಯಾಲಯದ ವಿಶ್ವಸ್ಥೆ ಚಂದ್ರಿಕಾ ಧನ್ಯ ಕಾರ್ಯಕ್ರಮಗಳ ವರದಿ ವಾಚಿಸಿ ಮಾತನಾಡಿ 2004ರ ಮೇ ತಿಂಗಳಲ್ಲಿ ಆರಂಭಗೊಂಡ ನೃತ್ಯವಸಂತ ನಾಟ್ಯಾಲಯವನ್ನು ಆಳ್ವಾಸ್ ಪ್ರತಿಷ್ಟಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿದ್ದರು. ಇದೀಗ ಹತ್ತನೇ ವರ್ಷದ ದಶಾರ್ಪಣಂ ಕಾರ್ಯಕ್ರಮವನ್ನು ಡಾ. ಆಳ್ವಾ ಅವರಿಂದ ಉದ್ಘಾಟಿಸುತ್ತಿರುವುದು ಸಂತಸದ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ಕೊಲ್ಯದ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಅವರನ್ನು ಹಾಗೂ ನಾಟ್ಯಗುರು ಶ್ರದ್ಧಾ ಎನ್ ಭಟ್ ಹಾಗೂ ಕಲಾವಿದ ಬಾಲಚಂದ್ರ ಭಾಗವತ್ ಅವರನ್ನು ಗೌರವಿಸಿ ಸನ್ಮಾಸಿಲಾಯಿತು.
ನೃತ್ಯ ಕಲಾವಿದೆ, ವಿಮರ್ಶಕಿ ವಿದುಷಿ ಪ್ರತಿಭಾ ಎಂ ಎಲ್ ಸಾಮಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮೋಹನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೇಹಾ ಶೆಟ್ಟಿ ಪ್ರಾರ್ಥಿಸಿದರು. ನೃತ್ಯ ವಸಂತ ನಾಟ್ಯಾಲಯದ ಮುಖ್ಯಸ್ಥೆ ಪ್ರವಿತಾ ಅಶೋಕ್ ಸ್ವಾಗತಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ನಾಟ್ಯಾಲಯದ ವಿಶ್ವಸ್ಥೆ ಕಲ್ಪನಾ ಭಾಸ್ಕರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನೃತ್ಯವಸಂತ ನಾಟ್ಯಾಲಯದ ಸದಸ್ಯರಿಂದ ವಿವಿಧ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.