ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಅಂಬೇಡ್ಕರ್ ಅವರ ಬದುಕು ಹೋರಾಟ ಮತ್ತು ಸಾಧನೆ ಜಗತ್ತಿನ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತದ್ದು ಈ ನಿಟ್ಟಿನಲ್ಲಿ ಅವರ ಬದುಕನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯ ಪಟ್ಟರು.
ಅವರು ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸಂವಿಧಾನ ನಿರ್ಮಾಣ ಮತ್ತು ದಲಿತೋದ್ಧಾರದ ಆಚೆಗೂ ಅಂಬೇಡ್ಕರ್ ಜೀವನದ ಸಾಧನೆಗಳು ಬಹಳಷ್ಟು ಇವೆ. ಅವರ ರಾಷ್ಟ್ರೀಯ ಚಿಂತನೆಗಳು ಮಾನವತಾವಾದ, ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳನ್ನು, ಬಹುಮುಖಿ ಕೆಲಸಗಳನ್ನು ವಿವರವಾಗಿ ಪರಿಚಯಿಸುವ ಕೆಲಸ ಹೆಚ್ಚು ಆಗಬೇಕಿದೆ ಎಂದು ಅವರು ಹೇಳಿದರು.
ಮೇಲ್ ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಜಯಪ್ರಕಾಶ್ ಧ್ವಜಾರೋಹಣವನ್ನು ನೆರವೇರಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು. ಮೇಲ್ ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಆಚಾರ್ಯ ಶುಭ ಹಾರೈಸಿದರು.
ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ನಾಗೇಶ್, ಅರ್ಚನ ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು. ಅಮೃತ ಯುವತಿ ಮಂಡಲದ ಅಧ್ಯಕ್ಷೆ ಸಹನಾ ಸಂವಿಧಾನ ಪೀಠಿಕೆಯನ್ನು ವಾಚಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಹೆಚ್. ಜಿ. ಸ್ವಾಗತಿಸಿ, ನಿರೂಪಿಸಿದರು.