ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊಳೆ ಪಾತ್ರಗಳಲ್ಲಿ ತುಂಬಿರುವ ಹೂಳು ಎತ್ತುವ ಸಂಬಂಧ 9 ತಿಂಗಳ ಹಿಂದೆ ನಡೆಸಿದ ಸಭೆಯ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಿರುವ ಬೇಸಿಗೆಯ ಒಂದೂವರೆ ತಿಂಗಳಲ್ಲಿ ಹೇಗೆ ಕೆಲಸ ಮಾಡುವುದು. ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಕ್ರಿಯಾಯೋಜನೆ ತಯಾರಿಸುವಂತಹ ಕೆಲಸವನ್ನೂ ಮಾಡುವುದಿಲ್ಲ, ಸಭೆಯ ನಿರ್ಣಯವನ್ನು ಅನುಷ್ಠಾನ ಮಾಡುವುದಿಲ್ಲ ಎಂದರೆ ಹೇಗೆ? ಈಗ ಹಾಗೆ ಹೀಗೆ ಎಂದು ಕಾರಣಗಳನ್ನು ಹೇಳುತ್ತಿದ್ದೀರಿ. ಮೊದಲೇ ಹೇಳಿದ್ದರೆ ಪರಿಹಾರ ಕಂಡುಕೊಳ್ಳಬಹುದಿತ್ತು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪದ ಮುಂಜಾಗ್ರತೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಪಂಚಾಯಿತಿ ಅಧಿಕಾರಿಗಳು, ಪ್ರತಿನಿಧಿ ಗಳು ಹಾಗೂ ನಾನಾ ಇಲಾಖಾಧಿಕಾರಿ ಗಳೊಂದಿಗೆ ನಡೆಸಿದ ಸಭೆಯಲ್ಲಿ ಸರಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಸಮಾಧಾನ ಹೊರಹಾಕಿದರು.
ಮಳೆಗಾಲದಲ್ಲಿ ನೆರೆ ಸಮಸ್ಯೆಯಿದ್ದು, ಪರಿಹಾರಕ್ಕಾಗಿ ಹೊಳೆಸಾಲುಗಳಲ್ಲಿ ಹೂಳೆತ್ತಲು ಅನುವಾಗುವಂತೆ 9 ತಿಂಗಳ ಹಿಂದೆ ಸಭೆ ನಡೆಸಿದ್ದೆ. ಸಭೆಯ ತೀರ್ಮಾನಗಳೇ ಅನುಷ್ಠಾನವಾಗಿಲ್ಲ. ಇಲಾಖೆಗಳ ನಡುವೆ ಸಮನ್ವಯ ಸಾಧಿಸದೇ ಈಗ ಕಾರಣಗಳನ್ನು ನೀಡಿದರೆ ಹೇಗೆ? ನದಿ ಬದಿಗೆ ಇರುವ ಒತ್ತುವರಿಯನ್ನು ಗುರುತಿಸಿ ಎಂದು ಸರ್ವೆ ಇಲಾಖೆಗೆ ಹೇಳಿದ್ದರೂ ಇನ್ನೂ ಮಾಡದಿದ್ದುದು ಯಾಕೆ ಎಂದು ಅವರು ಪ್ರಶ್ನಿಸಿದರು.

ಮೊಳಹಳ್ಳಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮರಾತೂರು, ಗಣಿ ಇಲಾಖೆ ಕಾಟಾಚಾರಕ್ಕೆ ಕೆಲಸ ಮಾಡುತ್ತಿದೆ. ಕೋಟಿ ಕೋಟಿ ಲೂಟಿ ಮಾಡುತ್ತಿದೆ. 300-400 ಲೋಡ್ ಗೆ ಅನುಮತಿ ನೀಡುವ ಇಲಾಖೆ 1 ಕೋಟಿ .ರೂ. ರಾಯಧನ ಬದಲು ಪಂಚಾಯತ್ಗೆ 50 ಸಾವಿರ ರೂ. ರಾಯಧನ ಬರುವಂತೆ ಮಾಡುತ್ತದೆ. ಇದರಿಂದ ಸರಕಾರಕ್ಕೆ ನಷ್ಟ ರಸ್ತೆ ಹಾಳು. ಪಂಚಾಯತನ್ನು ಲೆಕ್ಕಕ್ಕೇ ಇಟ್ಟುಕೊಳ್ಳುವುದಿಲ್ಲ ಎಂದು ದೂರಿದರು.
ಗಣಿ ಅಧಿಕಾರಿ ಸಂಧ್ಯಾ ಮರುಳ್ಯ ಪ್ರತಿಕ್ರಿಯಿಸಿ, ಅಣೆಕಟ್ಟುಗಳ ಬಳಿ 250 ಮೀ. ದೂರದ ಬಳಿಕವಷ್ಟೇ ನಾವು ಅನುಮತಿ ನೀಡಲು ಸಾಧ್ಯ. ಸಮೀಪವಿದ್ದರೆ ಸಣ್ಣನೀರಾವರಿ ಇಲಾಖೆ ಯವರ ಜಂಟಿ ಸಮೀಕ್ಷೆ ನಡೆದು ಕಡತಕ್ಕೆ ಸಹಿ ಹಾಕಬೇಕು. ಅವರು ಹಾಕುವುದಿಲ್ಲ ಎಂದು ಹೇಳಿದರು.
ಗಣಿ ಅಧಿಕಾರಿ ಸಂದೀಪ್ ಮಾತನಾಡಿ, ಕಾವ್ರಾಡಿ, ಕೊಕ್ಕರ್ಣೆ, ಯಡ್ತಾಡಿ, ವಡ್ಡರ್ಸೆ, ಕಾವಡಿ, ಉಳ್ಳೂರು, ಕೆದೂರು, ಬೇಳೂರು ಮೊದಲಾದೆಡೆ ಹಳ್ಳದಲ್ಲಿ ಹೂಳೆತ್ತಲು ಗ್ರಾ.ಪಂ. ವ್ಯಾಪ್ತಿಗಷ್ಟೇ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶ ಇದ್ದು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ನೀಡಲು ಬರುವುದಿಲ್ಲ ಎಂದು ಹೇಳಿದರು. 37 ಕಡೆಗೆ ಅನುಮತಿ ನೀಡಲಾಗಿದ್ದು 22 ಕಡೆ ಆರಂಭವಾಗಿದೆ. 13 ಕಡೆ ಸಮಸ್ಯೆಯಾಗಿದೆ. ಕೆಲವು ಪಂಚಾಯತ್ನವರು ಇಲಾಖೆಗೆ ಹಣ ಪಾವತಿಸಿಲ್ಲಎಂದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೆರೆ ನೀರಿನ ಸಮಸ್ಯೆ ಆಗುತ್ತಿದೆ. ಹೂಳು ತೆಗೆಯದಿದ್ದರೆ ಕಳೆದ ಬಾರಿಯಂತೆ ಈ ಬಾರಿಯೂ ಸಮಸ್ಯೆಯಾಗಲಿದೆ ಎಂದು ಸಾಲಿಗ್ರಾಮ ಪ.ಪಂ.ನವರು ತಿಳಿಸಿದರು. ಪ.ಪಂ.ಗೆ ಅನುಮತಿ ಅಸಾಧ್ಯ ಎಂದು ಗಣಿ ಅಧಿಕಾರಿ ಹೇಳಿದಾಗ, ಪರಿಹಾರ ಸೂಚಿಸಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ನೆರೆ ನೀರು ಬರದಂತೆ ಹೂಳೆತ್ತಲು ಅನುಮತಿ ಪಡೆಯಿರಿ. ಮರಳು ಬಂದರೆ ಗಣಿ ಇಲಾಖೆ ಗಮನಕ್ಕೆ ತನ್ನಿ ಅದನ್ನು ಕಾನೂನು ರೀತ್ಯಾ ದಂಡ ಹಾಕಿ ಪ.ಪಂ.ಗೆ ಹಸ್ತಾಂತರಿಸಲು ಇಲಾಖೆ ಕ್ರಮವಹಿಸಲಿ. ಸಣ್ಣನೀರಾವರಿ ಇಲಾಖೆಯವರು ಅಣೆಕಟ್ಟಿನ ಸಮೀಪ ಹೂಳೆತ್ತಲು ಅಗತ್ಯವಿರುವ ಜಂಟಿ ಸಮೀಕ್ಷೆನಡೆಸಿ. ನದಿಬದಿ ಒತ್ತುವರಿಯನ್ನು ದಿಶಾಂಕ್ ಆ್ಯಪ್ ಮೂಲಕ ಸರ್ವೆ ನಡೆಸಿಕೊಡಿ ಎಂದರು.
ಗಿಳಿಯಾರು ಭಾಗದಲ್ಲಿ ಮರಳುಗಾರಿಕೆ ನಡೆಸಬೇಡಿ. ಹೂಳು ಮಾತ್ರ ತೆಗೆಯಿರಿ ಎಂದು ಪಂಚಾಯತ್ ಅಧ್ಯಕ್ಷರು ಹೇಳಿದಾಗ, ಶಾಸಕರು ಈ ಮಾತನ್ನು ಊರವರು ಹೇಳಲಿ. ಅಲ್ಲೇ ಬಂದು ಸಭೆ ನಡೆಸಿ ಚರ್ಚೆ ನಡೆಸುವ ಅಲ್ಲಿಂದ ಬೇಡಿಕೆ ಬಂದ ಕಾರಣವೇ ಈ ಪ್ರಯತ್ನ ಎಂದರು.
ಕುಡಿಯುವ ನೀರಿಗೆ ತೊಂದರೆ ಆಗಬಾರದು:
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಶಾಸಕ ಕಿರಣ್ ಕುಮಾರ ಕೊಡ್ಗಿ ಮಾತನಾಡಿ, ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕುಂದಾಪುರ, ಕೋಟ, ಬ್ರಹ್ಮಾವರ ಹೋಬಳಿಯ ಎಲ್ಲಿಯೂ ಜನರಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆಯಾಗಕೂಡದು. ಈಗಾಗಲೆ ಕೆಲವೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಸಮಸ್ಯೆ ಪರಿಹಾರಕ್ಕೆ ತ್ವರಿತ ನೆಲೆ ಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ನೀರಿನ ಮೂಲ ಕಡಿಮೆ ಇರುವಲ್ಲಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾ ರರ ವಿರುದ್ಧ ಕ್ರಮ ಜರುಗಿಸಬೇಕು. ಹೆಂಗವಳ್ಳಿ ಯಲ್ಲಿ ಕಳೆದ 2-3 ವರ್ಷಗಳಿಂದ ಗುತ್ತಿಗೆದಾರ ರು ಸರಿಯಾಗಿ ಕೆಲಸ ನಿರ್ವಹಿಸದೆ ಪಂಚಾ ಯಿತಿ ಆಡಳಿತವನ್ನು ಸತಾಯಿಸುತ್ತಿದ್ದು, ಅಂತಹ ಗುತ್ತಿಗೆದಾರರನ್ನು ಬ್ಲ್ಯಾಕ್ಲೀಸ್ಟ್ಗೆ ಹಾಕಿ. ಜನರಿಗೆ ಯಾವುದೇ ರೀತಿಯ ತೊಂದ ರೆಯಾಗಕೂಡದು ಎಂದು ಎಚ್ಚರಿಸಿದರು.
ಕೊರ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ ಮಾತನಾಡಿ, ಪಂಚಾಯಿತಿ ವ್ಯಾಪ್ತಿ ಯಲ್ಲಿ ಕುಡಿಯುವ ನೀರಿಗೆ ಬಹಳ ಸಮಸ್ಯೆ ಯಾಗಿದೆ. ನೀರಿನ ಸೋರ್ಸ್ ಹೊಂದಿರುವ ಟ್ಯಾಂಕಿಗಳಿಂದ ಕೆಂಪು ನೀರು ಸರಬರಾಜು ಆಗುತ್ತಿದೆ ಎಂದು ನಾಗರಿಕರು ದೂರುತ್ತಿದ್ದಾರೆ. ಪಂಚಾ ಯಿತಿ ಹಲವು ಭಾಗಗಳಲ್ಲಿ ಈಗಾಗಲೆ ನೀರಿನ ಸೋರ್ಸ್ ಇಲ್ಲದೆ ಡ್ರೈನೆಸ್ ಆಗಿದೆ ಎಂದರು. ಉಡುಪಿ ಜಿಪಂ ಸಿಇಓ ಬಾಯಲ್ ಪ್ರತಿಕ್ರಿಯಿಸಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಪರಿಹರಿಸಲು ಕ್ರಮ ವಹಿಸುವೆ ಎಂದು ಭರವಸೆ ನೀಡಿದರು.
ಗೋಪಾಡಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, ಜೆಜೆಎಂ ಯೋಜನೆಯಡಿ ಎಲ್ಲೆಡೆ ಪೈಪ್ಲೈನ್ ಆಗಿದೆ. ಆದರೆ ನೀರಿನ ಮೂಲವೇ ಇಲ್ಲ. ನೀರಿನ ಮೂಲ ಇಲ್ಲದಿರುವಲ್ಲಿ ಟ್ಯಾಂಕ್ ನಿರ್ಮಿಸಿ, ಅದಕ್ಕೆ ಪೈಪ್ ಜೋಡಣೆ ಮಾಡುವುದಷ್ಟೇ ಗುತ್ತಿಗೆದಾರರ ಕಾರ್ಯ ಎಂಬಂತಾಗಿದೆ. ಗೋಪಾಡಿಯಲ್ಲಿ ಗೇಟ್ ವಾಲ್ ಲಿಕೇಜ್ ಕಂಡುಬಂದು ಹಲವು ಸಮಯ ಆಗಿದೆ. ಸಂಬಂಧಿತರ ಗಮನಕ್ಕೆ ತಂದರು ಅವರು ದುರಸ್ತಿ ಮಾಡುತ್ತಿಲ್ಲ. ಕೆಲವೊಂದೆಡೆ ಟ್ಯಾಂಕ್ ನಿರ್ಮಿಸದೆ ಪೈಪ್ ಲೈನ್ ಮಾಡಿದ್ದಾರೆ.. ಈ ರೀತಿ ಅವೈಜ್ಞಾನಿಕ ಕಾಮಗಾರಿ ಸರಿಯಲ್ಲ ಎಂದು ಹೇಳಿದರು.
ಕೋಟ ಗ್ರಾಮದ ಮೂಡುಗಿಳಿ ಯಾರು, ಕೋಟತಟ್ಟು ಗ್ರಾಮದ ಹಂದಟ್ಟು ಕೋಡಿ ಕನ್ಯಾನ ಗ್ರಾಮದ ಕೋಡಿಬೆಂಗ್ರೆ, ಅಮಾಸೆ ಬೈಲು ಗ್ರಾಮದ ಜಡ್ಡಿನಗದ್ದೆ, ಬಿಲ್ಲಾಡಿ ಪ್ರದೇಶದಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಕುರಿತಂತೆ ಸಂಬಂಧಿತ ಪಂಚಾಯಿತಿಯ ಪಿಡಿಒ, ಅಧ್ಯಕ್ಷರು ಮಾಹಿತಿ ಒದಗಿಸಿದರು.
ಮೊಳಹಳ್ಳಿ ಗ್ರಾಮದಲ್ಲಿ ಕೆಲವೊಂದು ಬೋವೆಲ್ಗಳಲ್ಲಿ ನೀರೇ ಇಲ್ಲ. ಕೈಲ್ಕೆರೆಯಲ್ಲಿನ ಸಾರ್ವಜನಿಕ ಬಾವಿ ಯಿಂದ ಕೆಂವು ನೀರು ಬರುತ್ತಿದೆ. ಈ ಬಗ್ಗೆ ಸಂಬಂಧಿತ ಇಲಾಖೆ ಗಮನಹರಿಸಬೇಕು ಎಂದು ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಆನಂದ ಮಾತನಾಡಿ, ವ್ಯಾಪ್ತಿಯಲ್ಲಿ ಅನಿಯಮಿತ ಪವರ್ಕೆಟ್ನಿಂ ದ ಕುಡಿಯುವ ನೀರು ಸರಬರಾಜಿಗೆ ತೊಂದ ರೆಯಾಗುತ್ತಿದೆ. ಅದರಲ್ಲೂ ಮಂಗಳವಾರ ಇಡಿ ದಿನ ಪವರ್ ಕಟ್ ನಡೆ ಯುತ್ತಿರುವುದು ಗೋಳು ಸೃಷ್ಟಿಸಿದೆ ಎಂದು ತಿಳಿಸಿದರು.
ಯಡ್ತಾಡಿ, ವಂಡಾರು, ಬಿಲ್ಲಾಡಿ, ಶಿರಿಯಾರ, ಹೆಗ್ಗುಂಜೆ ಭಾಗದಲ್ಲಿ ಎದುರಾಗಿ ರುವ ನೀರಿನ ಸಮಸ್ಯೆ, ಜೆಜೆಎಂನಿಂದ ಎದು ರಾಗಿರುವ ತೊಡಕುಗಳ ಬಗ್ಗೆ ಪಂಚಾಯಿತಿ ಪ್ರತಿನಿಧಿಗಳು ಸಭೆಯ ಗಮನಕ್ಕೆ ತಂದರು. ಸಮಸ್ಯೆ ಆಲಿಸಿದ ಜಿ.ಪಂ.ಸಿಇಒ ಬಾಯಲ್ ಸಂಬಂಧಿತ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಕುಡಿ ಯುವ ನೀರು ಸರಬರಾಜಿಗೆ ತೊಡಕಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.
ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಉಪಸ್ಥಿತರಿದ್ದರು.