ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೂಡಬಿದಿರೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ದಕ್ಷಿಣ ಕನ್ನಡದ ಜಿಲ್ಲೆಯ 8 ತಾಲೂಕುಗಳಲ್ಲಿ ಮೂಡುಬಿದಿರೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯನಿರ್ವಹಿಸುತ್ತಿದೆ. ಇಂದು ಮೂಡುಬಿದಿರೆಯಲ್ಲಿ ಅಸೋಸಿಯೇಶನ್ ನಿರ್ಮಾಣವಾಗುವುದರ ಮೂಲಕ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಹೆಚ್ಚಿನ ಖರ್ಚಿಲ್ಲದೆ ಆಡುತ್ತಿದ್ದ ಆಟ ಕಬಡ್ಡಿ. ಇದೊಂದು ಹಳ್ಳಿಯ ಕ್ರೀಡೆ. ಇಂದು ಪ್ರೋಕಬ್ಬಡಿ ಬಂದ ನಂತರ ಇದರ ಖ್ಯಾತಿ ಹಾಗೂ ಆಟಗಾರರಿಗೆ ಮನ್ನಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಲಭಿಸುತ್ತಿದೆ. ಮೂಡುಬಿದಿರೆ ತಾಲೂಕಿನ ನೂತನ ಅಧ್ಯಕ್ಷರು, ಯುವಕರು ಹಾಗೂ ಹಿಡಿದ ಕೆಲಸವನ್ನು ಅಷ್ಟೇ ಆಸ್ಥೆಯಿಂದ ಮಾಡುವವರು. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗೊಳ್ಳಲಿ ಎಂದು ಆಶಿಸಿದರು.
ತಾಲೂಕು ಕಬಡ್ಡಿ ಅಸೋಸಿಯೇಶನ್ ಮಹಾಪೋಷಕರು ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ನಾನೊಬ್ಬ ಕ್ರೀಡಾಪಟುವಿನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ತನ್ನ ತಂದೆ 1926ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಕ್ರಿಕೆಟ್ ತಂಡದ ನಾಯಕತ್ವವಹಿಸಿದ್ದರು. 1926ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿಯವರೊಂದಿಗೆ ಕ್ರಿಕೆಟ್ ಆಡಿದ್ದರು. ಆ ಹಿನ್ನಲೆಯಿಂದ ನಾನು ಕ್ರೀಡಾಸಚಿವನಾಗಿದ್ದ ಸಂದರ್ಭದಲ್ಲಿ ಕ್ರೀಡಾ ಕ್ಷೇತಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಹಕಾರಿಯಾಯಿತು. ನಾವೆಲ್ಲ ರಾಜಕೀಯವನ್ನು ಬದಿಗಿಟ್ಟು ಕ್ರೀಡಾಪಟುಗಳಿಗೆ ಬೆಂಬಲವನ್ನ ನೀಡುವ ಕೆಲಸ ಮಾಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಭವಿ?ವನ್ನ ರೂಪಿಸಿಕೊಳ್ಳಬಹುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಮೂಡಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ನಿಯೋಜಿತ ಅಧ್ಯಕ್ಷ ವಿವೇಕ್ ಆಳ್ವ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಸಂಸ್ಥೆಯ ಅಧ್ಯಕ್ಷರು ಕ್ರೀಡೆಗೆ ನೀಡಿದ ಕೊಡುಗೆಯಿಂದ ನನಗೆ ಈ ಗೌರವ ಲಭಿಸಿದೆ. ವಿವಿಧ ಸಂಘ ಸಂಸ್ಥೆಗಳಿಂದ ಉನ್ನತ ಹುದ್ದೆಯ ಅವಕಾಶಗಳು ಬಂದಾಗ ಸದಾ ನಿರಾಕರಿಸುತ್ತಾ ಬಂದ ನಾನು, ಈ ಹುದ್ದೆಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದೇನೆ. ದಕ್ಷಿಣ ಕನ್ನಡದಲ್ಲಿ ಕಬಡ್ಡಿಗೆ ವಿಶೇಷ ಸ್ಥಾನವಿದೆ. ಈ ಕ್ರೀಡೆಯ ಮೂಲಕ ಯುವ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಕೆಲಸವನ್ನು ನಾವೆಲ್ಲ ಜೊತೆಯಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಮೂಡುಬಿದಿರೆಯ 30 ಶಾಲೆಗಳ ವಿದ್ಯಾರ್ಥಿಗಳಿಗೆ ಕಬಡ್ಡಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ತರಬೇತಿ ಹಾಗೂ ಸೌಲಭ್ಯವನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಶಾಸಕರಾದಿಯಾಗಿ ಎಲ್ಲಾ ಮಹಾಪೋಷಕರು ಸಹಕಾರವನ್ನು ನೀಡುವಂತೆ ಕೋರಿಕೊಂಡರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಮಾಹಾಪೋಷಕರುಗಳಾದ ಶ್ರೀಪತಿ ಭಟ್, ತಿಮ್ಮಯ ಶೆಟ್ಟಿ, ಸುನಿಲ್ ಆಳ್ವ, ನಾರಾಯಣಪಿ ಎಂ., ಪ್ರೇಮನಾಥ ಶೆಟ್ಟಿ, ಅಬುಲಾಲ್, ಸುಚರಿತ ಶೆಟ್ಟಿ, ಸುದರ್ಶನ್ ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಶಿಯೇಶನ್ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಮೂಡಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಕಾರ್ಯಧ್ಯಕ್ಷ ಪ್ರಮೋದ್ ಸ್ವಾಗತಿಸಿ, ಕಾರ್ಯದರ್ಶಿ ಹಂಸವತಿ ಸಿಎಚ್ ವಂದಿಸಿ, ಸದಸ್ಯ ನವೀನ್ ಅಂಬೂರಿ ನಿರೂಪಿಸಿದರು.















