ಕೆ.ಎಸ್.ಆರ್.ಟಿ.ಸಿಯದ್ದು ಬಗೆಹರಿಯದ ಸಮಸ್ಯೆಯಾದಂತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಕ್ರೋಶ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಪರ್ಮಿಟ್ ಹೊಂದಿದ್ದರೂ ಕೆಎಸ್ಆರ್ಟಿಸಿ ಬಸ್ ಸೇವೆಯನ್ನು ಸ್ಥಗೀತಗೊಳಿಸಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೋರ್ಟ್ ತಡೆ ಇರುವ ಮಾರ್ಗದ ನಿಲ್ದಾಣವನ್ನು ಹೊರತುಪಡಿಸಿ ಬಾಕಿ ಮಾರ್ಗಗಳಿಗೆ ಬಸ್ ಓಡಿಸುವ ವ್ಯವಸ್ಥೆ ಮಾಡಿ. ತಡೆ ನೆಪವೊಡ್ಡಿ ಸಾರ್ವಜನಿಕ ಸೇವೆ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಸಭೆಯಲ್ಲಿಯೂ ಕೆ.ಎಸ್.ಆರ್.ಟಿ.ಸಿ ಸಮಸ್ಯೆ ಬಗ್ಗೆ ಚರ್ಚಿಸಲಾಗುತ್ತಿದ್ದು, ಕಾರಣಗಳನ್ನಷ್ಟೇ ನೀಡುತ್ತಾ ಬರಲಾಗುತ್ತಿದೆ. ಆದರೆ ಯಾವೊಂದು ಕೆಲಸವೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ವಿಳಂಬ ಧೋರಣೆ ಕೈಬಿಟ್ಟು ಬಸ್ ಸಂಚರಿಸಲು ಸೂಕ್ತ ವ್ಯವಸ್ಥೆ ಮಾಡಿ ಎಂದವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸದಸ್ಯರಾದ ಅನೀಶ್ ಪೂಜಾರಿ ಮಾತನಾಡಿ, ಬೈಂದೂರಿನಲ್ಲಿ ಸರಕಾರಿ ಕಾಲೇಜಿಗೆ ಹಲವಾರು ಬಾರಿ ಬೇಡಿಕೆ ಇರಿಸಿದ ನಂತರ ಬಸ್ ಸಂಚಾರ ಆರಂಭಿಸಲಾಗಿದ್ದು ಸಂತೋಷದ ವಿಚಾರ ಆದರೆ ಕಾಲೇಜು ಅವಧಿ ಮುಗಿಯುವ ಸಮಯದಲ್ಲಿ ಬಸ್ ಬಿಡದೇ, ಒಂದು ಗಂಟೆಯ ಬಳಿಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ವಿನಾಕಾರಣ ಕಾಯುವಂತಾಗಿದೆ. ಮಧ್ಯಾಹ್ನ 2:30ರಿಂದ 3:30ರ ಒಳಗೆ ಕಾಲೇಜು ಮಾರ್ಗದಿಂದ ಬೈಂದೂರು ತನಕ ಬಸ್ ಸಂಚರಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮುಕ್ರಿ ಮೊಹಮ್ಮದ್ ಅಲ್ತಾಫ್, ಶಿರೂರು ಭಾಗದಲ್ಲಿ ಕಾಲೇಜಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಸದೇ ಸಮಸ್ಯೆ ಎದುರಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪರ್ಮಿಟ್ ಇರುವ ಮಾರ್ಗದಲ್ಲಿ ಶೀಘ್ರದಲ್ಲಿ ಬಸ್ ಓಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು. ಬೈಂದೂರಿನಲ್ಲಿ ಬಸ್ ನಿಲ್ದಾಣದ ಕಾಮಗಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಂಡಿದೆ. ಅಲ್ಲಿನ ನೀರಿನ ಸಮಸ್ಯೆಯೂ ಬಗೆಹರಿದಿದೆ. ನವೆಂಬರ್ ತಿಂಗಳಿನಲ್ಲಿ ನಿಲ್ದಾಣ ಉದ್ಘಾಟನೆಗೆ ಯೋಜಿಸಲಾಗಿದೆ ಎಂದರು.
ಗ್ಯಾರಂಟಿಯಿಂದ 218.02 ಕೋಟಿ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 218.02 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಜೂನ್ ತಿಂಗಳ ತನಕ 21,717 ಮಂದಿಗೆ 112.03ಕೋಟಿ ಜಮಾ ಆಗಿದೆ. 7,141 ಮಂದಿಗೆ ಹಣ ಬರುವುದು ಬಾಕಿ ಇದೆ. ಜುಲೈ ಹಾಗೂ ಅಗಸ್ಟ್ ತಿಂಗಳ ಹಣ ಸಂದಾಯವಾಗುವುದು ಬಾಕಿ ಇದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 28214 ಕುಟುಂಬಗಳಿಗೆ 41.67 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1857 ಕುಟುಂಬಗಳಿಗೆ 2.67 ಕೋಟಿ ರೂ. ಸೇರಿದಂತೆ ಸುಮಾರು 44.35 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,532 ಪಡಿತರ ಚೀಟಿಗಳಿಗೆ 1.91 ಕೋಟಿ ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಯುವ ನಿಧಿ ಯೋಜನೆಯಡಿ 509 ಫಲಾನುಭವಿಗಳಿಗೆ 90.36ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 1.48ಕೋಟಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದು 58.81ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ರಾಜಕುಮಾರ್. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ಸೂರ್ಯಕಾಂತಿ ದೇವದಾಸ್ ವಿ.ಜೆ., ಬಾಬು ದೇವಾಡಿಗ, ಮುಕ್ರಿ ಮೊಹಮ್ಮದ್ ಅಲ್ತಾಫ್, ಪ್ರಭಾಕರ ನಾಯ್ಕ್, ಮೆಸ್ಕಾಂ, ಕೆಎಸ್ಆರ್ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
















