ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಬಹುದೊಡ್ಡದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆಯ 50ನೇ ವರ್ಷಾಚರಣೆಯ ಅಂಗವಾಗಿ “ಸುವರ್ಣಾಕ್ಷ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಕಲೆ ಯಕ್ಷಗಾನ. ಏಕೆಂದರೆ ಈ ಕಲೆಯಲ್ಲಿ ಹಾಡು, ಕುಣಿತ, ತಾಳ , ಮೇಳ, ಭಾವ, ಕಥೆ, ಜ್ಞಾನ, ಸಂಸ್ಕಾರ ಹೀಗೆ ಕಲಾತ್ಮಕವಾದ ಎಲ್ಲಾ ಸಂಗತಿಗಳು ಒಟ್ಟುಗೂಡಿ ಪ್ರದರ್ಶನಗೊಳ್ಳುತ್ತದೆ ಯು. ಅಲ್ಲದೆ ಶುದ್ಧವಾದ ಕನ್ನಡವನ್ನು ಮಾತ್ರ ಬಳಸುವ ಏಕೈಕ ಕಲೆ. ಇಂತಹ ಸಮೃದ್ಧ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಆ ಮೂಲಕ ಶಾಶ್ವತವಾಗಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಉಡುಪಿ ಜಿಲ್ಲೆ ಯಕ್ಷಗಾನ ಕಲೆಯನ್ನು ಉಳಿಸಿವ ಉತ್ಸಾಹದಲ್ಲಿದ್ದೇವೆ. ಶಾಲೆಗಳಲ್ಲಿ ಯಕ್ಷಗಾನವನ್ನು ಮಕ್ಕಳಿಗೆ ಕಲಿಸುವ ಮೂಲಕ ಈ ಕಲೆಯ ಉಳಿಯುವಿಕೆಯ ಪ್ರಯತ್ನ ನಡೆಯುತ್ತಿದೆ. ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯದ ಸಂಶೋಧನಾ ಗ್ರಂಥವದ್ದಂತೆ. ಕಾಲೇಜಿನ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿ ಯಾಗಿರುತ್ತದೆ ಎಂದು ಹೇಳಿದರು.
ಸುವರ್ಣಾಕ್ಷ ಕಾರ್ಯಕ್ರಮದ ಕುರಿತು ಮಾತನಾಡಿದ ಕೆ.ಜಿ. ಮಂಜುನಾಥ ಯಕ್ಷಗಾನವು ಪರಿಪೂರ್ಣ ಮತ್ತು ಸ್ಪಷ್ಟ ಮಾತೃ ಭಾಷೆ ಕನ್ನಡವನ್ನು ಬಳಸುವ ಏಕೈಕ ಪ್ರದರ್ಶನ ಕಲೆ. ಹಾಗಾಗಿ ಇದು ಮಾತೃಭಾಷೆಯಲ್ಲಿ ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು.
ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಸೌಕೂರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಿಶನ್ ಹೆಗ್ಡೆ ಪಳ್ಳಿ, ತೀರ್ಪುಗಾರಾದ ಉದಯಕುಮಾರ್ ಶೆಟ್ಟಿ, ನಂದೀಶ್ ಶೆಟ್ಟಿ ಬಿಲ್ಲಾಡಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿ, ಉಪನ್ಯಾಸಕಿ ಸ್ನೇಹ ಎಸ್. ನಿರೂಪಿಸಿ, ಕಾರ್ಯಕ್ರಮ ಸಂಚಾಲಕ ಶಶಾಂಕ್ ಪಟೇಲ್ ವಂದಿಸಿದರು.















