ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಕಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯ ಉದ್ಘಾಟನಾ ಕಾರ್ಯಕ್ರಮವು ಇತ್ತೀಚಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಉಪ್ಪುಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲು ವೇದಿಕೆಯಾಗಿದೆ. ಇದೊಂದು ಅಗಾಧವಾದ ಜ್ಞಾನ ಸಂಪತ್ತು ಸಾಧನೆಯ ಸಾಧನವಾಗಿದೆ. ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವನೆಯೊಂದಿಗೆ ತಂತ್ರಜ್ಞಾನದ ಆಸಕ್ತಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ ನಾಯ್ಕ ಅವರು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡರು. ಸಂಸ್ಥೆಯ ಪ್ರಾಂಶುಪಾಲರಾದ ಗಣಪತಿ ಅವಬ್ರತ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾಲೇಜು ವಿಭಾಗದ ಎಸ್ಡಿಎಂಸಿ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹಾಗೂ ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷರಾದ ಅರುಣ್ ಹೆಬ್ಬಾರ್ ಹಾಗೂ ಪ್ರಭಾರ ಉಪ ಪ್ರಾಂಶುಪಾಲರಾದ ಠಾಕೇಶ್ ಪಟಗಾರರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ವೀಕ್ಷಿಸಲು ಆಗಮಿಸಿದ ಬೈಂದೂರು ಶಾಸಕರು ಗುರುರಾಜ ಗಂಟಿಟಿಹೊಳೆ ಅವರು ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ವರ್ಕಿಂಗ್ ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಶುಭ ಹಾರೈಸಿದರು.


ವಿಜ್ಞಾನವಸ್ತು ಪ್ರದರ್ಶನದಲ್ಲಿ ವಿಜ್ಞಾನ ಚಿತ್ರಗಳ ರಂಗೋಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ, ಗಣಿತಶಾಸ್ತ್ರ,ವಿ ಭಾಗದ ವರ್ಕಿಂಗ್ ಮಾಡೆಲ್ಸ್ ಪುರಾತನ ಕಾಲದ ವಸ್ತುಗಳು, ಮೀನು ಸಾಕಾಣಿಕೆ, ಕಂಬಳದ ಸಲಕರಣೆಗಳು,ಕೃಷಿಯಂತ್ರಧಾರೆ ಹಾಗೂ ಕರಕುಶಲ ಕಲೆಗಳ ವಸ್ತುಗಳ ಪ್ರದರ್ಶನಗೊಂಡವು.
ಸುತ್ತಮುತ್ತಲಿನ ಪ್ರಾಥಮಿಕ ಶಾಲೆಗಳಾದ ಕಂಬದಕೋಣೆ, ನಾಯಕನ್ ಕಟ್ಟೆ, ಹೇರೆಂಜಾಲು, ಕಾಲ್ತೋಡು, ಕೊಡೇರಿ, ಹಿಂದುಸ್ತಾನಿ ನಾಗೂರು, ಕನ್ನಡ ನಾಗೂರು,ಸಂದೀಪನ ಆಂಗ್ಲ ಮಾಧ್ಯಮ ಶಾಲೆ, ಹೋಲಿ ಕ್ರಾಸ್ ಬೈಂದೂರು ಹಾಗೂ ಮಾದರಿ ಶಾಲೆ ಮರವಂತೆ ಇಲ್ಲಿಯ ವಿದ್ಯಾರ್ಥಿಗಳು ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಿಆರ್ಪಿ ಮಿತ್ರರು, ಎಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಪೋಷಕರು ಹಾಜರಿದ್ದರು. ಸಂಸ್ಥೆಯ ಎಲ್ಲಾ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮವನ್ನ್ನುಸಂಸ್ಥೆಯ ಕನ್ನಡ ಅಧ್ಯಾಪಕರಾದ ವಿಶ್ವನಾಥ್ ಶೆಟ್ಟಿ ನಿರೂಪಿಸಿ, ವಂದನೆಗೈದರು.















