ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳು ಹೊರಬರಬೇಕು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ಅನಂತ ಪದ್ಮನಾಭ ಐತಾಳ್ ಹೇಳಿದರು.
ಅವರು ಮಂಗಳವಾರ ನ್ಯೂ ಕಾರ್ಕಡ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ರಹ್ಮಾವರ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ, 2025-26 ಕಾರ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಿಕೆ ಬಹುಮುಖ್ಯವಾಗಿದೆ, ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರತಿಭೆ ಅನಾವರಣಗೊಳ್ಳುವ ವೇದಿಕೆಯಾಗಿದೆ ಎಂದರಲ್ಲದೆ ಗುರು ಹಿರಿಯರ ಬಗ್ಗೆ ಭಯದ ನೆರಳಲ್ಲಿ ಬದುಕಿದ ಅನುಭವಗಳನ್ನು ಹಂಚಿಕೊಂಡ ಅವರು ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯ ಮೂಲಕ ತಮ್ಮಲ್ಲಿರುವ ವಿವಿಧ ಸಾರ್ಮಥ್ಯವನ್ನು ತೊರ್ಪಡಿಸಿ ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಮಕ್ಕಳು ರಚಿಸಿದ ಚಿಟ್ಟೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು. ಸಭೆಯಲ್ಲಿ ಇತ್ತೀಚಿಗೆ ಕಾರ್ಕಡ ಕ್ಲಸ್ಟರ್ ಸಿಆರ್ಪಿ ಸವಿತಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕೋಟದ ಪಂಚವರ್ಣ ಸಂಘಟನೆ ವತಿಯಿಂದ ಶಾಲೆಗೆ ದತ್ತಿನಿಧಿಯನ್ನು ಪಂಚವರ್ಣ ಯುವಕಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಚಕ್ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಹೊಳ್ಳ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಸಿಎ ಬ್ಯಾಂಕ್ ಸಿಇಓ ಶರತ್ ಕುಮಾರ್ ಶೆಟ್ಟಿ, ಶಿಕ್ಷಣ ಇಲಾಖೆ ಬ್ರಹ್ಮಾವರ ಇದರ ಸಂಯೋಜಕರಾದ ನಾಗರಾಜ್ ಭಟ್, ಅನ್ನಪೂರ್ಣೇಶ್ವರಿ, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಗುರುರಾಜ್ ಭಟ್, ಕೋಟ ವಿವೇಕ ವಿದ್ಯಾಸಂಸ್ಥೆಯ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಶಾಲಾ ಮುಖ್ಯ ಶಿಕ್ಷಕ ಬಿ. ಎನ್. ಸತ್ಯನಾರಾಯಣ, ಸಾಲಿಗ್ರಾಮ ಪಟ್ಟಣಪಂಚಾಯತ್ ಆರೋಗ್ಯ ನಿರೀಕ್ಷಕಿ ಮಮತಾ, ಹಿರಿಯ ಲೆಕ್ಕಾಧಿಕಾರಿ ಚಂದ್ರಶೇಖರ್ ಸೋಮಯಾಜಿ ಉಪಸ್ಥಿತರಿದ್ದರು.
ಚೇರ್ಕಾಡಿ ಕ್ಲಸ್ಟರ್ ನ ಸಿಆರ್ ಪಿ ಮಾಲತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಪ್ರಭಾಕರ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮವನ್ನು ಗೌರವ ಶಿಕ್ಷಕಿಯರಾದ ಐಶ್ವರ್ಯ, ಸುಮಾ ನಿರೂಪಿಸಿ, ಶಿಕ್ಷಕ ಸುಧೀರ್ ಕಾಮತ್ ವಂದಿಸಿದರು.
















